ಕೋಲಾರ: ಜಿಲ್ಲೆಯಲ್ಲಿ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಮಳೆಗೆ ಲಕ್ಷಾಂತರ ಮೌಲ್ಯದ ತೋಟಗಾರಿಕೆ, ಕೃಷಿ ಬೆಳೆಗಳು ನೆಲಕಚ್ಚಿದ್ದು, ಮನೆಗಳು ಹಾನಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೂ ಸರಾಸರಿ 6.51 ಮಿಮೀ ಮಳೆಯಾಗಿವೆ.
ತಾಲ್ಲೂಕಿನ ಕೋಟಿಗಾನಹಳ್ಳಿ ಗ್ರಾಮದ ರೈತ ಕೆ.ವೈ.ಗಣೇಶ್ಗೌಡ ನರ್ಸರಿಯ ಪರದೆ ಗಾಳಿಗೆ ಹಾರಿಹೋಗಿದ್ದು, ಟೊಮೆಟೊ, ಕೋಸು, ಬದನೆಕಾಯಿ ಸೇರಿದಂತೆ ವಿವಿಧ ಸಸಿಗಳು ಹಾನಿಯಾಗಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಮೌಲ್ಯದಷ್ಟು ನಷ್ಟವುಂಟಾಗಿದೆ.
ಅದೇ ಗ್ರಾಮದ ಹನುಮಪ್ಪ ಎಂಬುವರ ಮನೆಯ ಮೇಲ್ಛಾವಣಿ ಶೀಟ್ಗಳು ಗಾಳಿ ಹಾರಿಹೋಗಿದ್ದು, ಮನೆಯೊಳಗೆ ನೀರು ನುಗ್ಗಿದೆ. ಇದರಿಂದ ಕುಟುಂಬಸ್ಥರೆಲ್ಲಾ ಇಡೀ ರಾತ್ರಿಯೆಲ್ಲಾ ಸಂಕಷ್ಟ ಎದುರಿಸಿದ್ದಾರೆ. ಭಾನುವಾರ ಸಂಜೆ ದೇವರ ಕಾರ್ಯ ಇತ್ತಾದಾರೂ ಆ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಲ್ಲ.
ಕೊಯ್ಲಿಗೆ ಬಂದಿದ್ದ ಬೆಳೆಗಳು ಮಳೆಗೆ ನಾಶವಾಗಿವೆ. ಇನ್ನೆರಡು ಮೂರು ವಾರಗಳಲ್ಲಿ ಕೊಯ್ಲಿಗೆ ಬರಬೇಕಿದ್ದ ಟೊಮೆಟೊ, ಬೀನ್ಸ್, ಕ್ಯಾಪ್ಸಿಕಂ ನೆಲಕ್ಕುರುಳಿವೆ.
ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು, ನೆಲವಂಕಿ ಹಾಗೂ ಯಲ್ದೂರು ಹೋಬಳಿಗಳಲ್ಲಿ ಮಳೆಯಾಗಿದ್ದು, ಗಾಳಿ ಮಾವಿನ ಕಾಯಿ ನೆಲಕ್ಕೆ ಉದುರಿದೆ. ಹೆಚ್ಚಾಗಿ ಗಾಳಿ ಬೀಸಿದ ಕಾರಣ ರೆಂಬೆಗಳು ಮುರಿದಿವೆ. ನೆಲಕ್ಕೆ ಬಿದಿದ್ದರು ಕಾಯಿಯನ್ನು ಮಾರುಕಟ್ಟೆಗೆ ಎತ್ತುಕೊಂಡು ಹೋದರೆ ಕಡಿಮೆ ಬೆಲೆಗೆ ಖರೀದಿಸುತ್ತಿದ್ದು, ರೈತರು ಅತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 6.51 ಮಿಮೀ ಮಳೆಯಾಗಿದ್ದು, ಆ ಪೈಕಿ ಜಿಲ್ಲೆಯ ಬಂಗಾರಪೇಟೆ 7.6 ಮಿಮೀ, ಕೋಲಾರ 6.8 ಮಿಮೀ, ಮಾಲೂರು 8.5 ಮಿಮೀ, ಮುಳಬಾಗಿಲು 1.4 ಮಿಮೀ ಹಾಗೂ ಶ್ರೀನಿವಾಸಪುರದಲ್ಲಿ 8.3 ಮಿಮೀ ಮಳೆಯಾಗಿವೆ.
`ಸಾಲ ಮಾಡಿ ನರ್ಸರಿ ನಡೆಸುತ್ತಿದ್ದಾನೆ, ರೈತರ ಬೇಡಿಕೆಗೆ ತಕ್ಕಂತೆ ಸಸಿಗಳನ್ನು ಬೆಳೆಸಲಾಗಿತ್ತು, ಆದರೆ ಭಾನುವಾರ ರಾತ್ರಿ ಸುರಿದ ಗಾಳಿ ಮಳೆಗೆ ಸಂಪೂರ್ಣವಾಗಿ ಹಾನಿಯಾಗಿದ್ದು, ಕೆಲಸಕ್ಕೆ ಬಾರದಂತಾಗಿದೆ. ಮಳೆಯಿಂದ ಆಗಿರುವ ನಷ್ಟಕ್ಕೆ ಶೀಘ್ರವೇ ಸಂಬಂಧಪಟ್ಟ ಇಲಾಖೆಗಳು ಪರಿಹಾರ ಕಲ್ಪಿಸಿಕೊಡಬೇಕು' ಎಂದು ಗಣೇಶ್ಗೌಡ ಒತ್ತಾಯಿಸಿದ್ದಾರೆ.