ಕೋಲಾರ: ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಯಾಣಿಸುತ್ತಿದ್ದ ಕಾರು ಭಾನುವಾರ ತಾಲ್ಲೂಕಿನ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿಂದೇಟು ಹಾಕಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರಕ್ಕೆ ಬರುತ್ತಿದ್ದ ರವಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ‘ನೀವು ಯಾವ ಸೀಮೆ ಎಂಎಲ್ಸಿ? ನಿನಗೆ ಮಾನ ಮರ್ಯಾದೆ ಇದೆಯಾ? ಎಂಎಲ್ಸಿ, ಎಂಎಲ್ಎಯಾದರೆ ಏನು ಬೇಕಾದರೂ ಮಾಡಬಹುದಾ? ಚೂರಾದರೂ ಮಾನವೀಯತೆ, ಸೌಜನ್ಯ ಇರಬೇಕಲ್ಲವೇ' ಎಂದು ಪ್ರಶ್ನಿಸಿದ್ದಾರೆ.
‘ಕಾರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ದೂರು ದಾಖಲಿಸಿ’ ಎಂದಿದ್ದಾರೆ. ‘ರಸ್ತೆಯಲ್ಲಿ ಅಪಘಾತ ನಡೆದಾಗ ಕೆಲ ಸಚಿವರು ತಮ್ಮ ಕಾರಿನಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಕೇಳಿಲ್ಲವೇ’ ಎಂದು ಗರಂ ಆದರು. ಕಾರು ಹತ್ತಿ ಕುಳಿತ ರವಿಕುಮಾರ್ ಅವರನ್ನು ‘ಇಳಿಯಯ್ಯಾ ಕೆಳಗೆ, ಪೊಲೀಸರೇನು ನಿನ್ನ ಜೇಬಿನಲ್ಲಿದ್ದಾರಾ?’ ಎಂದು ಹೇಳಿ ಮತ್ತೆ ಕೆಳಗಿಳಿಸಿದರು.
ಬೈಕ್ ಸವಾರ ಹೊಸಕೋಟೆ ತಾಲ್ಲೂಕಿನ ಶಿವನಾಪುರ ಗ್ರಾಮದ ಗೋಪಾಲ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲು ಹಾಗೂ ಕೈಗೆ ಗಾಯವಾಗಿದೆ.
ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿಯನ್ನ ತಿಳಿಗೊಳಿಸಿದರು. ವಿಧಾನ ಪರಿಷತ್ ಸದಸ್ಯರ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ.