ಬಂಗಾರಪೇಟೆ: ಕೃಷಿ ಮತ್ತು ಹೈನೋದ್ಯಮಕ್ಕೆ ಮಾರಕವಾಗುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಯಿಂದ ರೈಲ್ವೆ ನಿಲ್ದಾಣದವರೆಗೂ ಹಸುಗಳ ಸಮೇತ ಮೆರವಣಿಗೆ ನಡೆಸಿದರು.
ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇಶದ 30 ಕೋಟಿ ಕುಟುಂಬ ಕೃಷಿ, ಹೈನೋದ್ಯಮವನ್ನು ನೆಚ್ಚಿಕೊಂಡಿದೆ. ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿ ಹಾಗೂ ಮಾರುಕಟ್ಟೆ ನೀತಿಯಿಂದ ಕೃಷಿ ಕ್ಷೇತ್ರದ ಮೇಲೆ ಭಾರಿ ಹೊಡೆತ ಬಿದ್ದಿದೆ ಈಗ ಆರ್ಸಿಇಪಿ ದೇಶದ ರೈತರನ್ನು ದಿವಾಳಿ ಮಾಡಲಿದೆ ಎಂದರು.
ಅಲ್ಲದೆ ದೇಶದ ಆಹಾರ ಸಾರ್ವಭೌಮತ್ವಕ್ಕೆ ದಕ್ಕೆ ಉಂಟಾಗಿದೆ. ಸಾರ್ವಜನಿಕ ಉದ್ಯಮಗಳನ್ನು ಮುಚ್ಚಿ, ಕಾರ್ಮಿಕರನ್ನು ಬೀದಿಗೆ ತಳ್ಳಲಾಗಿದೆ. ದೇಶ ಕಾರ್ಪೊರೇಟ್ ಕಂಪನಿಗಳ ವಶವಾಗಿವೆ. ಇಂತ ಸಂದಿಗ್ದ ಸ್ಥಿತಿಯಲ್ಲಿ ಆರ್ಸಿಇಪಿ ಒಪ್ಪಂದ ಮಾಡಿಕೊಳ್ಳಲು ಭಾರತ ಒಲವು ತೋರಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.
ರಾಜ್ಯದ ಸಂಸದರು ಇದರ ಬಗ್ಗೆ ದ್ವನಿ ಎತ್ತುತ್ತಿಲ್ಲ. ಲಕ್ಷಾಂತರ ಕುಟುಂಬಗಳ ಮರಣ ಶಾಸನಕ್ಕೆ ಸರ್ಕಾರ ಮುನ್ನುಡಿ ಬರೆಯಲು ಹೊಟಿದೆ. ಕೂಡಲೆ ಅದನ್ನು ಕೈಬಿಡಬೇಕು. ಒಪ್ಪಂದದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅದ್ಯಕ್ಷೆ ಎ.ನಳಿನಿ, ಕೆ.ಶ್ರೀನಿವಾಸಗೌಡ, ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಇದ್ದರು.