ಕೋಲಾರ: ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಬೇಕು’ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.
ಭಾರತ ಸೇವಾದಳ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಮಾತನಾಡಿ, ‘ಮಾನವೀಯ ಮೌಲ್ಯಗಳು ಅವನತಿ ಹೊಂದುತ್ತಿರುವ ದಿನಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಪ್ರಸ್ತುತವಾಗಿದೆ’ ಎಂದರು.
‘ಉತ್ತಮ ದೇಶ ನಿರ್ಮಾಣವು ವಿದ್ಯಾರ್ಥಿಗಳ ಜವಾಬ್ದಾರಿ. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾಗದೆ ಸಮಾಜದ ಅಭಿವೃದ್ಧಿಗೆ ಪಣ ತೊಡಬೇಕು. ಮೊಬೈಲ್ನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲವಿದೆ. ಇದನ್ನು ತಿಳಿದು ಸದುದ್ದೇಶಕ್ಕೆ ಮೊಬೈಲ್ ಬಳಸಬೇಕು. ವಾಲ್ಮೀಕಿಯು ರಾಮಾಯಣ ಕೃತಿ ಮೂಲಕ ಪ್ರತಿಪಾದಿಸಿದ ಮೌಲ್ಯಗಳನ್ನು ಸಮಾಜದಲ್ಲಿ ಪುನರ್ ಪ್ರತಿಷ್ಠಾಪಿಸಬೇಕು’ ಎಂದು ತಿಳಿಸಿದರು.
‘ರಾಮಾಯಣವು ಕೇವಲ ಹಿಂದೂಗಳ ಧರ್ಮ ಗ್ರಂಥ ಮಾತ್ರವಲ್ಲ. ಬದಲಿಗೆ ಮನುಷ್ಯರ ನಡುವಿನ ಸಂಬಂಧಗಳ ಮೌಲ್ಯ ಪ್ರತಿಪಾದಿಸುವ ಗ್ರಂಥವಾಗಿದೆ. ಇಡೀ ಜಗತ್ತಿನ ಜನ ಸಮುದಾಯದ ಗ್ರಂಥವಾಗಿದೆ’ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ಬಿಇಒ ಕಚೇರಿ ಅಧೀಕ್ಷಕ ಗಿರೀಶ್, ವ್ಯವಸ್ಥಾಪಕ ಮುನಿಸ್ವಾಮಿಗೌಡ, ಬಿಆರ್ಪಿ ನಾಗರಾಜ್, ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್, ಪದಾಧಿಕಾರಿ ಸಂಪತ್ಕುಮಾರ್ ಪಾಲ್ಗೊಂಡರು.