ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಸರ್ಕಾರದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಕೆ.ನಾರಾಯಣಗೌಡ ಪ್ರತಿಭಟನೆ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಟ್ಟಿರುವುದು ರೈತ ವಿರೋಧಿ ನಿಲುವಾಗಿದೆ. ತಿದ್ದುಪಡಿ ಮಸೂದೆ ರೈತರ ಹಿತಾಸಕ್ತಿಗೆ ಮಾರಕವಾಗಿರುವುದರಿಂದ ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ತಿದ್ದುಪಡಿ ಮಸೂದೆ ಅನ್ವಯ ಕೈಗಾರಿಕೋದ್ಯಮಿಗಳು ಹಾಗೂ ಬಂಡವಾಳಶಾಹಿಗಳು ಕೃಷಿ ಭೂಮಿ ಖರೀದಿಸಿ, ರೈತರನ್ನು ಒಕ್ಕಲೆಬ್ಬಿಸುವ ಅಪಾಯ ಇದೆ. ಈಗಾಗಲೇ ರೈತರು ಕೃಷಿ ವಲಯದಲ್ಲಿ ನಷ್ಟಕ್ಕೆ ಗುರಿಯಾಗಿದ್ದಾರೆ. ಆದರೂ ಬಿಡದೆ ವ್ಯವಸಾಯ ಮಾಡಿ ಕೊಂಡು ಬರುತ್ತಿದ್ದಾರೆ. ಮುಂದೆ ಭೂಮಿ ಬಂಡವಾಳಶಾಹಿಗಳ ಕೈ ಸೇರಿದರೆ ದೇಶದಲ್ಲಿ ಧಾನ್ಯದ ಉತ್ಪಾದನೆ ಕುಸಿದು, ಅನ್ಯ ದೇಶಗಳಿಗೆ ಕೈಯೊಡ್ಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಭೂಮಿ ಕೃಷಿಕರ ಕೈಯಲ್ಲಿರಬೇಕು. ಈ ಕ್ಷೇತ್ರಕ್ಕೆ ಕೃಷಿಕರಲ್ಲದವರ ಪ್ರವೇಶಕ್ಕೆ ಅವಕಾಶ ನೀಡಬಾರದು. ರೈತರ ಅನ್ನವನ್ನು ಕಸಿಯುವ ಸರ್ಕಾರದ ನೀತಿಗಳ ವಿರುದ್ಧ ಸಾಂಘಿಕ ಹೋರಾಟ ನಡೆಸಬೇಕು ಎಂದು ಹೇಳಿದರು.
ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಉಪ ತಹಶೀಲ್ದಾರ್ ಮಲ್ಲೇಶ್ ಅವರಿಗೆ ನೀಡಲಾಯಿತು. ಬಂಗವಾದಿ ನಾಗರಾಜ್, ಆಂಜಪ್ಪ, ಸಹದೇವಣ್ಣ, ಶೇಕ್ ಷಫಿ ಉಲ್ಲಾ, ಲೋಕೇಶ್ ಇದ್ದರು.