ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗನಹಳ್ಳಿ ಸ್ಯಾಟಲೈಟ್ ರೈಲು ನಿಲ್ದಾಣಕ್ಕೆ ಒಪ್ಪಿಗೆ

Last Updated 10 ಫೆಬ್ರುವರಿ 2018, 6:57 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ತಾಲ್ಲೂಕಿನ ನಾಗನಹಳ್ಳಿಯಲ್ಲಿ ಸ್ಯಾಟಲೈಟ್‌ ರೈಲು ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ₹ 789.29 ಕೋಟಿ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಅತ್ಯುತ್ತಮ ಸೌಲಭ್ಯಗಳುಳ್ಳ ಉಪ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಈ ಮಾರ್ಗದಲ್ಲಿ ಮತ್ತೊಂದು ನಿಲ್ದಾಣ ಬೇಕು ಎಂಬುದು ಜನರ ಬಹುಕಾಲದ ಬೇಡಿಕೆಯಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿರುವುದು ನಿಲ್ದಾಣದಲ್ಲಿ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.

ಈ ಕುರಿತು ಮೈಸೂರು– ಕೊಡಗು ಸಂಸದ ಪ್ರತಾಪ ಸಿಂಹ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರನ್ನು ಹಲವು ಬಾರಿ ಭೇಟಿ ನೀಡಿ ಮನವಿ ಸಲ್ಲಿಸಿದ್ದರು. ಸಂಸದರ ಮನವಿಗೆ ಸ್ಪಂದಿಸಿರುವ ಸಚಿವರು, 2018–19ನೇ ಸಾಲಿನ ಬಜೆಟ್‌ನಲ್ಲಿ ಅನುಮೋದನೆ ನೀಡಿದ್ದಾರೆ.

ಅಗತ್ಯವೇನು?: ಮೈಸೂರು ನಿಲ್ದಾಣದಲ್ಲಿ ರೈಲುಗಳ ಸ್ವಚ್ಛತೆಗೆ ಜಾಗದ ಕೊರತೆಯಿತ್ತು. ಈಗಿರುವ ನಿಲ್ದಾಣದಲ್ಲಿ ಈ ಸೌಲಭ್ಯ ಇಲ್ಲದ ಕಾರಣಕ್ಕೆ ಹೆಚ್ಚು ರೈಲುಗಳು ಬರಲೂ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಮೈಸೂರು– ಬೆಂಗಳೂರು ಜೋಡಿಮಾರ್ಗ ಪೂರ್ಣಗೊಂಡಿರುವ ಕಾರಣ, ರೈಲುಗಳ ಸಂಖ್ಯೆ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚುತ್ತದೆ. ಈ ಕಾರಣದಿಂದಾಗಿ ಸ್ಯಾಟಲೈಟ್‌ ನಿಲ್ದಾಣದ ಅಗತ್ಯವಿದೆ’ ಎಂದು ಸಂಸದ ಪ್ರತಾಪ ಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕಾಗಿ ಒಟ್ಟು 347 ಎಕರೆ ಜಾಗವನ್ನು ಗುರುತಿಸಲಾಗಿದೆ. ಅಗತ್ಯ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭವಾಗುತ್ತದೆ. ಮೇ 1ರಿಂದ ಕಾಮಗಾರಿಗಳು ಆರಂಭ ವಾಗುತ್ತವೆ. ಮುಂದಿನ 100 ವರ್ಷ ಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮೈಸೂರು ನಿಲ್ದಾಣಕ್ಕೆ ಸೋಲಾರ್ ಶಕ್ತಿ: ಮೈಸೂರು ರೈಲು ನಿಲ್ದಾಣಕ್ಕೆ ಸುಸ್ಥಿರ ವಿದ್ಯುತ್‌ ಶಕ್ತಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳ ಚಾವಣಿಗೆ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗಿದೆ. ಫೆ.15ರಂದು ಈ ಕಾರ್ಯ ಪೂರ್ಣಗೊಳ್ಳಲಿದೆ.

ಈ ಸೌರಶಕ್ತಿ ಫಲಕಗಳಿಂದ ಒಟ್ಟು 210 ಕಿಲೋವ್ಯಾಟ್ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಇದರಲ್ಲಿ 100 ಕಿಲೋವ್ಯಾಟ್‌ ವಿದ್ಯುತ್ತನ್ನು ವಿಭಾಗೀಯ ಕಚೇರಿಗೆ ಬಳಸಿಕೊಳ್ಳಲಾಗುತ್ತದೆ. ಬಾಕಿ 110 ಕಿಲೋವ್ಯಾಟ್‌ ವಿದ್ಯುತ್ತನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅತುಲ್ ಗುಪ್ತಾ ತಿಳಿಸಿದ್ದಾರೆ.

ಹಸಿರು ಶಕ್ತಿ ಯೋಜನೆಯ ಅಡಿಯಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ. ಇದರಿಂದ ಒಟ್ಟು ಶೇ 30ರಷ್ಟು ಸಾಂಪ್ರದಾಯಿಕ ವಿದ್ಯುತ್‌ ಉಳಿಯುತ್ತದೆ. ಸೌರಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಸೌಲಭ್ಯವಿಲ್ಲ. ಹಾಗಾಗಿ, ರಾತ್ರಿ ಸಮಯದಲ್ಲಿ ಸಾಂಪ್ರದಾಯಿಕ ವಿದ್ಯುತ್‌ ಮೂಲವನ್ನೇ ಬಳಸಲಾಗುತ್ತದೆ. ಈಗಾಗಲೇ ಅಶೋಕಪುರಂನಲ್ಲಿರುವ ರೈಲ್ವೆ ಕಾರ್ಯಾಗಾರದಲ್ಲಿ 500 ಕಿಲೋವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಅನ್ನು ಸೌರಶಕ್ತಿ ಮೂಲಕ ಉತ್ಪಾದಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT