ಕೋಲಾರ: ‘ಕೈಗಾರಿಕೆಗಳಲ್ಲಿ ಸಫಾಯಿ ಕಾರ್ಮಿಕರಿಗೆ ಕಾರ್ಯ ಒತ್ತಡ ಇರಬಾರದು. ಜತೆಗೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೈಗಾರಿಕೆಗಳ ಆಡಳಿತ ಮಂಡಳಿಗೆ ತಿಳಿಸಿದರು.
ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ವಿವಿಧ ಕೈಗಾರಿಕೆಗಳ ಸ್ವಚ್ಛತಾ ಕಾರ್ಮಿಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿ, ‘ಸ್ವಚ್ಛತಾ ಕೆಲಸಗಾರರು ಜೀವನ ನಿರ್ವಹಣೆಗಾಗಿ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಬರುತ್ತಾರೆ. ಅವರನ್ನು ನಿಕೃಷ್ಟವಾಗಿ ಕಾಣಬಾರದು. ಅವರಿಗೂ ಕಾರ್ಮಿಕ ಕಾನೂನುಗಳು ಅನ್ವಯವಾಗುತ್ತವೆ’ ಎಂದರು.
‘ನಿಯಮಾನುಸಾರ ಸ್ವಚ್ಛತಾ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ಒದಗಿಸಬೇಕು. ಇಎಸ್ಐ ಮತ್ತು ಪಿ.ಎಫ್ ನೀಡಿಕೆಯಲ್ಲಿ ಮೋಸ ಆಗಬಾರದು. ಜತೆಗೆ ಸಂಬಳ ನೀಡಿಕೆಯಲ್ಲಿ ವಿಳಂಬ ಆಗಬಾರದು. ಉದ್ಯೋಗದಾತರು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡಬೇಕು. ಸಮಾಜದಲ್ಲಿ ಪ್ರತಿ ಸಫಾಯಿ ಕಾರ್ಮಿಕರಿಗೂ ಕನಿಷ್ಠ ಗೌರವ ನೀಡಬೇಕು’ ಎಂದು ಸೂಚಿಸಿದರು.
‘ಕೈಗಾರಿಕಾ ಪ್ರದೇಶದಲ್ಲಿನ ಸಫಾಯಿ ಕಾರ್ಮಿಕರಿಗೆ ಸೂಕ್ತ ರಕ್ಷಣಾ ಸಲಕರಣೆಗಳನ್ನು ಒದಗಿಸಬೇಕು. ಜತೆಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಸಫಾಯಿ ಕಾರ್ಮಿಕರನ್ನು ಶೋಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ಖಡಕ್ ಎಚ್ಚರಿಕೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ, ಉಪ ವಿಭಾಗಾಧಿಕಾರಿ ಆನಂದ್ಪ್ರಕಾಶ್ ಮೀನಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ರವಿಚಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಪಾಟೀಲ್, ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಹಾಜರಿದ್ದರು.