ಕೋಲಾರ: ‘ದೇಶದ ಪಂಚ ಕಳಶ ಎನಿಸಿಕೊಂಡಿರುವ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ರಾಷ್ಟ್ರ ಭಾಷೆ ಮತ್ತು ಸಂವಿಧಾನವನ್ನು ಎಲ್ಲಾ ಭಾರತೀಯರು ಗೌರವಿಸಬೇಕು. ಇವು ದೇಶಪ್ರೇಮ, ದೇಶಭಕ್ತಿಯ ಸಂಕೇತಗಳು’ ಎಂದು ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ವಿ.ಮುನಿನಾರಾಯಣಪ್ಪ ಹೇಳಿದರು.
ಹರಟಿ ಶಾಲೆಯಲ್ಲಿ ಶನಿವಾರ ನಡೆದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ರಾಷ್ಟ್ರೀಯ ಹಬ್ಬ ಸೇರಿ ಹಲವು ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಧ್ವಜಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು. ರಾಷ್ಟ್ರಗೀತೆ ಹಾಡುವಾಗ ಸಮಯ ಪಾಲನೆಗೆ ಮಹತ್ವ ಕೊಡಬೇಕು’ ಎಂದರು.
"ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕ್ರೀಡೆ, ದೇಶಭಕ್ತಿ ಅನಾವರಣಗೊಳಿಸುವಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡುವ ರೀತಿ ತರಬೇತಿ ಕೊಡಬೇಕು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ಸಲಹೆ ನೀಡಿದರು.
‘ಶಾಲಾ, ರಾಷ್ಟ್ರಧ್ವಜ ಆರೋಹಣ, ಅವರೋಹಣದ ಪದ್ಧತಿ, ನಿಯಮಗಳನ್ನು ಪ್ರತಿಯೊಬ್ಬರು ಅರಿತಿರಬೇಕು. ಮಕ್ಕಳಿಗೂ ಇದರ ಬಗ್ಗೆ ತರಬೇತಿ ಕೊಡಬೇಕು’ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ವಿ.ಗಂಗಾಧರ್ ತಿಳಿಸಿದರು.
ಜಿಲ್ಲಾ ಭಾರತ ಸೇವಾದಳ ಸಂಘಟಕ ಎಂ.ಬಿ.ದಾನೇಶ್, ಶಾಲೆಯ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಮತಾ, ಶಿಕ್ಷಕರಾದ ಸೊಣ್ಣೇಗೌಡ, ಗೋವಿಂದಪ್ಪ, ಮುನಿಯಪ್ಪ, ಮೀನಾ, ಮಮತಾ ಪಾಲ್ಗೊಂಡರು.