ಕೋಲಾರ/ಕೆಜಿಎಫ್: ಜಿಲ್ಲೆಯ ಗಡಿ ಭಾಗದ ಬಿಸಾನತ್ತಂ ಬಳಿ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚಿಸುತ್ತಿದ್ದ ಜಾಲ ಭೇದಿಸಿರುವ ಆಂಧ್ರಪ್ರದೇಶದ ಚಿತ್ತೂರು ಪೊಲೀಸರು ₹1.29 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ತನಿಮಡಗು ಗ್ರಾಮದ ಮಹದೇವ, ಶಿವಕುಮಾರ್, ಚಿಕ್ಕಬಳ್ಳಾಪುರದ ಎಸ್.ಗಂಗಾಧರ್, ಬೆಂಗಳೂರಿನ ಎನ್.ಧನಶೇಖರ್, ತಮಿಳುನಾಡಿನ ವಿ. ರಾಮಚಂದ್ರನಾಯ್ಡು, ಎಸ್.ವಿನಾಯಗಂ, ಇ.ಶೇಖರ್ ಮತ್ತು ಆಂಧ್ರಪ್ರದೇಶದ ವಿ.ಬಿ.ಶ್ರೀನಪ್ಪ ಬಂಧಿತರು.
ನಗದು ಜತೆಗೆ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ಗಳು ಸೇರಿದಂತೆ ₹ 2.10 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ತಮಿಳುನಾಡಿನ ತಿರುಪತ್ತೂರಿನ ನವೀನ್ಕುಮಾರ್ ಎಂಬುವವರಿಗೆ ರೈಸ್ ಪುಲ್ಲಿಂಗ್ನಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದರು. ಈ ಕುರಿತು ಚಿತ್ತೂರು ಪೊಲೀಸರಿಗೆ ಖಚಿತವಾದ ಮಾಹಿತಿ ದೊರೆತಿತ್ತು.
ಚಿತ್ತೂರು ಪೊಲೀಸರಿಗಿಂತ ಮೊದಲೇ ಈ ಸಂಗತಿ ತಿಳಿದಿದ್ದ ಕಾಮಸಮುದ್ರ ಹಾಗೂ ಬಂಗಾರಪೇಟೆ ಠಾಣೆ ಪೊಲೀಸರು ಆರೋಪಿಗಳಾದ ಮಹದೇವ ಮತ್ತು ಶಿವಕುಮಾರ್ ಅವರಿಂದ ಹಣ ಪಡೆದು ಸುಮ್ಮನಾಗಿದ್ದರು. ಆರೋಪಿಗಳನ್ನು ಬಂಧಿಸಿದ ನಂತರ ಹೆಚ್ಚಿನ ತನಿಖೆಗೆ ಚಿತ್ತೂರು ಪೊಲೀಸರು ಜಿಲ್ಲೆಗೆ ಬರುತ್ತಿದ್ದಂತೆ ಗಾಬರಿಯಾದ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಮಧ್ಯವರ್ತಿಗಳ ಮೂಲಕ ತಾವು ಪಡೆದ ಹಣವನ್ನು ಚಿತ್ತೂರು ಪೊಲೀಸರಿಗೆ ನೀಡಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.