ಬಂಗಾರಪೇಟೆ: ಪಟ್ಟಣದ ಮುಖ್ಯರಸ್ತೆಯಿಂದ ಹುಲಿಬೆಲೆ ಮಾರ್ಗದ ಮಾಸ್ತಿವರೆಗಿನ ರಸ್ತೆ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತಸೇನೆ ತಾಲ್ಲೂಕು ಘಟಕದ ಸದಸ್ಯರು ಉಪ ತಹಶೀಲ್ದಾರ್ ಮುಕ್ತಾಂಬ ಅವರ ಮೂಲಕ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ಈ ರಸ್ತೆ ಮಾರ್ಗದಲ್ಲಿ ನಿತ್ಯ ವಾಹನದಟ್ಟಣೆ ಸಾಮಾನ್ಯ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು 5 ವರ್ಷದಿಂದ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯ ಪರಿಸ್ಥಿತಿ ಒದಗಿದೆ. ರೈತರು, ವಿದ್ಯಾರ್ಥಿಗಳು, ಗರ್ಭಿಣಿಯರು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ಗೆ ಕರೆ ಮಾಡಿದರೂ ಹಾಳಾದ ರಸ್ತೆಯಿಂದಾಗಿ ಸಕಾಲಕ್ಕೆ ತಲುಪುತ್ತಿಲ್ಲ ಎಂದು ತಾಲ್ಲೂಕು ಘಟಕ ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್ ಹೇಳಿದರು.
ಸಾಕಷ್ಟು ಭಾರಿ ಮನವಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕು. ಸಮಸ್ಯೆಗೆ ಸ್ಪಂದಿಸದೇ ಹೋದಲ್ಲಿ ರಸ್ತೆಯಲ್ಲೇ ಪೈರು ನಾಟಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹುಲಿಬೆಲೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನಕುಮಾರ್, ರೈತ ಸೇನೆ ಮಹಿಳಾ ನಗರ ಘಟಕದ ಅಧ್ಯಕ್ಷೆ ಜಾನಕಿ, ಪ್ರಧಾನ ಕಾರ್ಯದರ್ಶಿ ತುಳಸಿರಾಮ್ಸಿಂಗ್, ಕಾರ್ಯದರ್ಶಿ ಸತೀಶ್, ಹುಲಿಬೆಲೆ ಸುರೇಶ್, ಎಂ.ರಾಮನ್ ಇದ್ದರು.