ಕೋಲಾರ: ‘ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿದ್ದು ಶಿಕ್ಷಕರು ಸೇವಾ ಮನೋಭಾವದಿಂದ ಶಾಲೆಗಳಲ್ಲಿ ಶಾಖೆ ಸ್ಥಾಪನೆ ಮಾಡಬೇಕು’ ಎಂದು ಮದರ್ ಥೆರೆಸಾ ಶಾಲೆ ಮುಖ್ಯ ಶಿಕ್ಷಕ ಹನುಮಪ್ಪ ತಿಳಿಸಿದರು.
ನಗರದ ಮದರ್ ಥೆರೆಸಾ ಶಾಲಾ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಗುರುವಾರ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆದುಕೊಳ್ಳುವ ಯಂತ್ರಗಳಾಗಿಸಿದ್ದಾರೆ. ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರೆ ಕೌಶಲ ತರಬೇತಿ ಪಡೆದುಕೊಳ್ಳುತ್ತಾರೆ’ ಎಂದು ಹೇಳಿದರು.
‘ಮಕ್ಕಳನ್ನು ಕೇವಲ ಕಲಿಕೆಗೆ ಮೀಸಲಾಗಿಸದೇ ಪರಿಸರ ಸಂರಕ್ಷಣೆ, ಸೇವಾ ಮನೋಭಾವ, ನಾಯಕತ್ವ ಗುಣ ಸಂಸ್ಥೆ ಪೂರಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದರು.
ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ‘ಸಮಾಜದ ಅಭಿವೃದ್ಧಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕರು ತರಬೇತಿಯ ಪ್ರಯೋಜನೆ ಪಡೆದು ಶಾಖೆ ಸ್ಥಾಪನೆ ಮಾಡಬೇಕು’ ಎಂದು ಕೋರಿದರು.
‘ಪೋಷಕರು ಮಕ್ಕಳನ್ನು ಸಂಸ್ಥೆಯ ಶಿಬಿರಗಳಿಗೆ ಕಳುಹಿಸಿದಾಗ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ. ಆದ್ದರಿಂದ ತರಬೇತಿ ಪಡೆದ ಶಿಕ್ಷಕರು ಮಕ್ಕಳಲ್ಲಿ ಬದಲಾವಣೆ ಕಾಣಲು ಸೇವಾ ಮನೋಭಾವದಿಂದ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ಸುರೇಶ್,ಉಮಾದೇವಿ, ನಾರಾಯಣಸ್ವಾಮಿ, ಗೌರಾಬಾಯಿ, ವಿ.ಬಾಬು, ವಿಶ್ವನಾಥ್, ಭಾರತಿ, ವಿನಯ್, ನಂಜುಂಡಪ್ಪ ಇದ್ದರು.