ಕೋಲಾರ: ‘ಮಕ್ಕಳ ಜ್ಞಾನ ವೃದ್ಧಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಚಟುವಟಿಕೆಗಳು ಪೂರಕವಾಗಿವೆ’ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟರವಣಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮದನಹಳ್ಳಿಯಲ್ಲಿ ಬುಧವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಮಕ್ಕಳ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಸದೃಢತೆಗೆ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳು ಸಹಕಾರಿ’ ಎಂದರು.
‘ಸ್ಕೌಟ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ. ಅವರಲ್ಲಿ ಪರಿಸರ ಪ್ರಜ್ಞೆ, ಶಿಸ್ತು, ಸಂಯಮ ಹಾಗೂ ನಾಯಕತ್ವದ ಗುಣ ಕಾಣಬಹುದು. ಪೋಷಕರು ತಮ್ಮ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸೇರ್ಪಡೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳು ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಇದರ ಮಹತ್ವ ಅರಿತುಕೊಳ್ಳಬೇಕು. ಮಕ್ಕಳು ಮುಖ್ಯವಾಗಿ ಸಮಯಪಾಲನೆ ಮಾಡಬೇಕು. ಸಮಯಪಾಲನೆ ಮಾಡದವರು ಜೀವನದ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ’ ಎಂದು ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಅಶ್ವತ್ಥನಾರಾಯಣ್ ಹೇಳಿದರು.
ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಶಿಕ್ಷಕರಾದ ಶ್ರೀಕಾಂತ್, ಸಂಸ್ಥೆ ಪದಾಧಿಕಾರಿಗಳಾದ ವಿಶ್ವನಾಥ್, ಅಶ್ವಿನಿ, ವಿನಯ್ಕುಮಾರ್, ಶಿವಕುಮಾರ್, ರಾಜೇಶ್, ಪ್ರಕಾಶ್, ಪೂರ್ಣಿಮಾ ಹಾಜರಿದ್ದರು.