ಹಿರೇಗದ್ದೆ( ಬಾಳೆಹೊನ್ನೂರು): ಜನರ ಭಾವನೆಗಳನ್ನು ದುಡ್ಡು ಕೊಟ್ಟು ಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಮುಖಂಡರು ಅರ್ಥಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಆರೋಪಿಸಿದರು.
ಕೊಪ್ಪ ತಾಲ್ಲೂಕಿನ ಹಿರೇಗದ್ದೆ ಗ್ರಾಮದ ಹೂವಿನಹಕ್ಲು ಸಮುದಾಯ ಭವನದಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ವಿದರ್ಭ ಪ್ಯಾಕೇಜ್ ನೀಡುವ ಮೂಲಕ ಕ್ಷೇತ್ರದ ರೈತರಿಗೆ ನೆರವಾಗಿತ್ತು. ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನಿಲಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ 30 ಲಕ್ಷ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಕೇಂದ್ರ ಸರ್ಕಾರ ಅವ್ಶೆಜ್ಞಾನಿಕ ನೀತಿಯಿಂದಾಗಿ ಕಾಳುಮೆಣಸಿನ ಬೆಲೆ 700ರಿಂದ 300ಕ್ಕೆ ಕುಸಿದಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುಕ್ಕೊಡಿಗೆ ರವೀಂದ್ರ ಮಾತನಾಡಿ, ‘ಶಾಸಕ ಜೀವರಾಜ್ ಅವರು ಮೇಗುಂದಾ ಹೋಬಳಿ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ. ಶಾಸಕರ ಹಿಂಬಾಲಕರೇ ಗುತ್ತಿಗೆದಾರರಾಗಿದ್ದು ಹೇರೂರು ಕಾಲೋನಿ ತಲುಪುವ ರಸ್ತೆಗೆ ಕಾಂಕ್ರೀಟ್ ಹಾಕಿದ್ದು ಸಂಪೂರ್ಣ ಕಳಪೆಯಿಂದ ಕೂಡಿದೆ. ರಾಜೇಗೌಡರು ವರ್ಗಾವಣೆ ದಂದೆಯಲ್ಲಿ ತೊಡಗಿದ್ದಾರೆ ಎಂದು ಕೆಲವು ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಿದ್ದು, ಇದನ್ನು ಅವರು ಸಾಬೀತುಪಡಿಸಲಿ. ಇಲ್ಲದಿದ್ದಲ್ಲಿ ಅವರು ನಂಬಿರುವ ಯಾವುದಾದರೂ ದೇವರ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಸವಾಲು ಎಸೆದರು.
ಹಿರೇಗದ್ದೆ ಗ್ರಾಮ ಪಂಚಾಯಿತಿಯ ಬಿ.ಎಂ.ಸುದೇವ್, ಜಯಪುರದ ವಜ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಕಾರಗದ್ದೆ ಚಂದ್ರೇಗೌಡ, ಜಯಪುರ ಗ್ರಾಮ ಪಂಚಾಯಿತಿಯ ಡಿ.ಬಿ.ರಾಜೇಂದ್ರ, ಮಹೇಶ್, ಪ್ರವೀಣ್ ಕುಮಾರ್, ಶಿವರಾಮೇಗೌಡ, ಮುದ್ದಣ್ಣ ಇದ್ದರು.