ಜಿಲ್ಲೆಯ ರೈತರ ನಿದ್ದೆಗೆಡಿಸಿದ ಅಂಗಮಾರಿ

ಕೋಲಾರ: ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಅಂಗಮಾರಿ ಹಾಗೂ ಬೆಂಕಿ ರೋಗ ತಗುಲಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ವಾರ್ಷಿಕ ಸುಮಾರು ₹ 200 ಕೋಟಿ ಮೊತ್ತದ ಟೊಮೆಟೊ ವಹಿವಾಟು ನಡೆಯತ್ತದೆ.
ಜಿಲ್ಲೆಯಾದ್ಯಂತ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. 15 ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಿದ್ದು, ಇದರಿಂದ ಟೊಮೆಟೊ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ.
ಬಹುತೇಕ ಜಮೀನುಗಳಲ್ಲಿ ಟೊಮೆಟೊ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಅಂಗಮಾರಿ ರೋಗಬಾಧಿತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾತ್ರೋರಾತ್ರಿ ಬೆಳೆಯೇ ನಾಶವಾಗುತ್ತಿದೆ. ಮತ್ತೊಂದೆಡೆ ಬೆಂಕಿ ರೋಗವು ಟೊಮೆಟೊ ಬೆಳೆಯನ್ನು ಬಾಧಿಸುತ್ತಿದೆ.
ಟೊಮೆಟೊ ಜತೆಗೆ ಪ್ರಮುಖ ತೋಟಗಾರಿಕಾ ಬೆಳೆಗಳಾದ ಆಲೂಗಡ್ಡೆ ಹಾಗೂ ದಪ್ಪ ಮೆಣಸಿನಕಾಯಿ ಬೆಳೆಗೂ ಅಂಗಮಾರಿ ರೋಗ ತಗುಲಿದೆ. ಅಂಗಮಾರಿ ರೋಗಕ್ಕೆ ಕಾರಣವಾಗಿರುವ ಶಿಲೀಂಧ್ರಗಳು ಗಿಡದ ಎಲೆಗಳನ್ನು ತಿನ್ನುತ್ತಿದ್ದು, ಕಾಂಡದ ಭಾಗ ಕೊಳೆತು ಗಿಡಗಳು ಸೊರಗುತ್ತಿವೆ.
ಹತೋಟಿಗೆ ಬರುತ್ತಿಲ್ಲ: ರೈತರು ಟೊಮೆಟೊ ಬೆಳೆಗೆ ವಿವಿಧ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಬೆಳೆಯಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನುಗಳ ಟೊಮೆಟೊ ಬೆಳೆಗೂ ರೋಗ ಹಬ್ಬುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಮೋಡ ಮುಸುಕಿದ ವಾತಾವರಣ ಹಾಗೂ ಜಡಿ ಮಳೆ ಮುಂದುವರಿದರೆ ಅಂಗಮಾರಿ ರೋಗ ಮತ್ತಷ್ಟು ಉಲ್ಬಣಗೊಂಡು ಟೊಮೆಟೊ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.
ತಾಲ್ಲೂಕುವಾರು ಬೆಳೆ ವಿಸ್ತೀರ್ಣ (ಹೆಕ್ಟೇರ್ನಲ್ಲಿ)
ತಾಲ್ಲೂಕು | ಟೊಮೆಟೊ ಬೆಳೆ ವಿಸ್ತೀರ್ಣ | ಆಲೂಗಡ್ಡೆ ಬೆಳೆ ವಿಸ್ತೀರ್ಣ | ದಪ್ಪ ಮೆಣಸಿನಕಾಯಿ ಬೆಳೆ ವಿಸ್ತೀರ್ಣ |
ಬಂಗಾರಪೇಟೆ | 739 | 550 | 33 |
ಕೆಜಿಎಫ್ | 493 | 366 | 22 |
ಕೋಲಾರ | 2,244 | 1,403 | 193 |
ಮಾಲೂರು | 1,152 | 1,130 | 132 |
ಮುಳಬಾಗಿಲು | 2,731 | 2,142 | 71 |
ಶ್ರೀನಿವಾಸಪುರ | 1,150 | 560 | 24 |
* 15 ಸಾವಿರ ಮಂದಿ ಟೊಮೆಟೊ ಬೆಳೆಗಾರರು
* 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆ
* ₹ 200 ಕೋಟಿ ವಾರ್ಷಿಕ ಟೊಮೆಟೊ ವಹಿವಾಟು
* 6 ಸಾವಿರ ಹೆಕ್ಟೇರ್ನಲ್ಲಿ ಆಲೂಗಡ್ಡೆ ಬೆಳೆ
* 12 ಸಾವಿರ ಮಂದಿ ಆಲೂಗಡ್ಡೆ ಬೆಳೆಗಾರರು
* 500 ಹೆಕ್ಟೇರ್ನಲ್ಲಿ ದಪ್ಪ ಮೆಣಸಿನಕಾಯಿ ಬೆಳೆ
* 600 ಮಂದಿ ದಪ್ಪಮೆಣಸಿನಕಾಯ ಬೆಳೆಗಾರರು