ಕೋಲಾರ: ಬೇಸಿಗೆ ಆರಂಭದ ಬೆನ್ನಲ್ಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ನಗರವಾಸಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕೆ ಆರಂಭಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಬಹುಪಾಲು ಘಟಕಗಳು ಸ್ಥಗಿತಗೊಂಡಿವೆ.
ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯದ ಜನಸಂಖ್ಯೆಗೆ ಹೋಲಿಸಿದರೆ ನಗರಕ್ಕೆ ಪ್ರತಿನಿತ್ಯ ಸುಮಾರು 2.70 ದಶಲಕ್ಷ ಲೀಟರ್ (ಎಂಎಲ್ಡಿ) ನೀರಿನ ಅಗತ್ಯವಿದೆ.
ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ನಗರಕ್ಕೆ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್ ಶುದ್ಧ ಕುಡಿಯುವ ನೀರು ಕೊಡಬೇಕು. ಆದರೆ, ನಗರದಲ್ಲಿ ಅರ್ಧಕ್ಕೂ ಕಡಿಮೆ ಅಂದರೆ 35 ಲೀಟರ್ ಮಾತ್ರ ನೀರು ಕೊಡಲಾಗುತ್ತಿದೆ.
ನಗರವಾಸಿಗಳಿಗೆ ಆದಷ್ಟು ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ಅಟಲ್ ನಗರ ಪುನರುತ್ಥಾನ ಹಾಗೂ ನಗರ ಪರಿವರ್ತನಾ ಯೋಜನೆಯಡಿ (ಅಮೃತ್) 35 ವಾರ್ಡ್ನಲ್ಲೂ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ನಗರಸಭೆ ಅನುಮೋದನೆ ನೀಡಿತ್ತು. ಆದರೆ, ಘಟಕ ನಿರ್ಮಾಣಕ್ಕೆ 4 ವಾರ್ಡ್ನಲ್ಲಿ ಸರ್ಕಾರಿ ಜಾಗ ಲಭ್ಯವಾಗದ ಕಾರಣ 31 ವಾರ್ಡ್ನಲ್ಲಿ ಘಟಕ ನಿರ್ಮಿಸಲಾಗಿದೆ.
₹ 11 ಲಕ್ಷ ವೆಚ್ಚ: ಘಟಕಗಳಿಗೆ ಇತ್ತೀಚೆಗಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿತ್ತು. ಪ್ರತಿ ಘಟಕವು ಗಂಟೆಗೆ 2 ಸಾವಿರ ಲೀಟರ್ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿವೆ.
ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್ಡಿಬಿ) ಪ್ರತಿ ಘಟಕವನ್ನು ಸುಮಾರು ₹ 11 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿ, ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಎಂ.ಎನ್.ರಮೇಶ್ ಎಂಜಿನಿಯರ್್ಸ ಅಂಡ್ ಕಂಟ್ರ್ಯಾಕ್ಟರ್್ಸ ಏಜೆನ್ಸಿಗೆ ವಹಿಸಿದೆ. ಈ ಏಜೆನ್ಸಿಯವರು ವಾರ್ಡ್ಗಳಲ್ಲಿನ ನಗರಸಭೆ ಕೊಳವೆ ಬಾವಿಗಳಿಂದ ಘಟಕಗಳಿಗೆ ನೀರಿನ ಸಂಪರ್ಕ ಪಡೆದಿದ್ದಾರೆ. ಘಟಕಗಳಲ್ಲಿ ಎಟಿಎಂ ರೀತಿಯ ಸ್ವೈಪಿಂಗ್ ಉಪಕರಣ ಅಳವಡಿಸಲಾಗಿದೆ.
ಏಜೆನ್ಸಿಯವರು ಸಾರ್ವಜನಿಕರಿಂದ ಮುಂಗಡ ಹಣ ಪಡೆದು ಎಟಿಎಂ ಕಾರ್ಡ್ ಮಾದರಿಯ ಸ್ವೈಪಿಂಗ್ ಕಾರ್ಡ್ ವಿತರಿಸಿದ್ದಾರೆ. ಸಾರ್ವಜನಿಕರು ಈ ಕಾರ್ಡ್ ಬಳಸಿ ಘಟಕಗಳಲ್ಲಿ ನೀರು ಪಡೆಯಬಹುದು. ಪ್ರತಿ ಬಾರಿ ಕಾರ್ಡ್ ಬಳಸಿದಾಗ ಹಣವು ಏಜೆನ್ಸಿಯ ಖಾತೆಗೆ ವರ್ಗಾವಣೆಯಾಗುತ್ತದೆ. ಒಂದು ಬಾರಿಗೆ ₹ 5 ಕಡಿತಗೊಂಡು 20 ಲೀಟರ್ ನೀರು ಬರುತ್ತದೆ.
ನೀರು ಪೂರೈಕೆಗೆ ಹಿಂದೇಟು: ದಿನದ 24 ತಾಸೂ ಘಟಕಗಳು ಕಾರ್ಯ ನಿರ್ವಹಿಸಬೇಕು. ಆದರೆ, ಘಟಕಗಳಿಗೆ ನೀರು ಪೂರೈಸುವ ಬಹುತೇಕ ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತಿದೆ. ಮತ್ತೊಂದೆಡೆ ಸ್ಥಳೀಯ ವಾಲ್ಮನ್ಗಳು ಘಟಕಗಳಿಗೆ ನೀರು ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ. ನಗರಸಭೆ ವತಿಯಿಂದಲೂ ಘಟಕಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಹೀಗಾಗಿ ಘಟಕಗಳನ್ನು ಮುಚ್ಚಲಾಗಿದೆ.
ಘಟಕಗಳು ಸ್ಥಗಿತಗೊಂಡಿರುವ ಸಂಬಂಧ ದೂರು ನೀಡಲು ಸ್ಥಳೀಯರು ಏಜೆನ್ಸಿ ಪ್ರತಿನಿಧಿಗಳ ಮೊಬೈಲ್ಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ನಗರಸಭೆಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಏಜೆನ್ಸಿಯವರನ್ನು ನಂಬಿ ಹಣ ಪಾವತಿಸಿದ ನಗರವಾಸಿಗಳಿಗೆ ನೀರೂ ಇಲ್ಲ, ಹಣವೂ ಇಲ್ಲ ಎಂಬಂತಾಗಿದೆ. ನಗರವಾಸಿಗಳ ಬಳಿ ಘಟಕದ ಕಾರ್ಡ್ ಇದ್ದರೂ ಖಾಸಗಿ ಟ್ಯಾಂಕರ್ ಮಾಲೀಕರಿಗೆ ದುಪ್ಪಟ್ಟು ಹಣ ಕೊಟ್ಟು ನೀರು ಖರೀದಿಸುವ ತೊಂದರೆ ತಪ್ಪಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.