ಮುಳಬಾಗಿಲು: ‘ತಾಲ್ಲೂಕಿನಲ್ಲಿರುವ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ದೇವಾಲಯಗಳಿಗೆ ನೀಡುತ್ತಿರುವ ತಸ್ತೀಕ್ ಹಣವನ್ನು ವರ್ಷಕ್ಕೆ ₹ 1 ಲಕ್ಷದವರೆಗೂ ಹೆಚ್ಚಿಸಬೇಕು’ ಎಂದು ತಾಲ್ಲೂಕು ಬ್ರಾಹ್ಮಣ ಸಂಘದ ಯುವ ವೇದಿಕೆ ಅಧ್ಯಕ್ಷ ಎಚ್.ಎಸ್. ಹರೀಶ್ ಒತ್ತಾಯಿಸಿದರು.
ನಗರದ ಸುಂಕು ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತ ಒಕ್ಕೂಟದ ತಾಲ್ಲೂಕು ಶಾಖೆ ಉದ್ಫಾಟಿಸಿ ಅವರು ಮಾತನಾಡಿದರು.
ಸರ್ಕಾರ ಈಗ ನೀಡುತ್ತಿರುವ ತಸ್ತೀಕ್ ಹಣ ದೇವರ ಪೂಜಾ ಸಾಮಗ್ರಿಗಳಿಗೆ ಬಳಕೆಯಾಗುತ್ತಿದೆ. ಅರ್ಚಕರ ಗೌರವ ಧನ ತೀರ ಕಡಿಮೆಯಾಗಿದೆ. ಇದರಿಂದ ಅರ್ಚಕರು ಕುಟುಂಬ ನಿರ್ವಹಣೆ ಮಾಡಲು ತೊಂದರೆಯಾಗಿದೆ ಎಂದರು.
ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಪಿ. ಸುದರ್ಶನ್ ದೀಕ್ಷಿತ್ ಮಾತನಾಡಿ, ಮುಜರಾಯಿ ಇಲಾಖೆಯಲ್ಲಿ ಗುಮಾಸ್ತರ ಕೊರತೆ ಇದೆ. ಇದರಿಂದ ಅರ್ಚಕರ ಕೆಲಸಗಳು ನಿಗದಿತ ಸಮಯಕ್ಕೆ ಆಗುತ್ತಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು.
ಚಿದಂಬರ ಸೌಹಾರ್ದ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಮಧುಸೂದನ್ ಮಾತನಾಡಿದರು. ಒಕ್ಕೂಟದ ಕಾರ್ಯದರ್ಶಿ ಕೆ. ಸುಕುಮಾರ್, ಖಜಾಂಚಿ ರಾಘವಮೂರ್ತಿ ಹಾಜರಿದ್ದರು.