ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ ಬೆದರಿಕೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಎಸ್‌ಪಿಗೆ ದೂರು

Last Updated 8 ಅಕ್ಟೋಬರ್ 2022, 6:07 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ಪಟ್ಟಣದ ಒಬ್ಬಟ್ಲು ಕೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ತಡೆಯಾಜ್ಞೆ ತಂದಿರುವುದಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ತಮ್ಮ ಬೆಂಬಲಿಗರ ಮೂಲಕ ಬೆದರಿಕೆ ಹಾಕಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು’ ಎಂದು ಗಂಗಮ್ಮನಪಾಳ್ಯದ ಶ್ರೀಧರ್ ಮೂರ್ತಿ ಶುಕ್ರವಾರ ನೋಂದಣಿ ಅಂಚೆ ಮೂಲಕ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸದ್ದಾರೆ.

ಪಟ್ಟಣದ ಸರ್ವೆ ನಂ.137ರ ಒಬ್ಬಟ್ಲು ಕೆರೆ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಕ್ರಮವಾಗಿ ಜಾಗ ಗುರುತಿಸಲಾಗಿತ್ತು. ಈ ಬಗ್ಗೆ ಕರ್ನಾಟಕ ಭೂಕಬಳಿಕೆ ತಡೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಲಾಗಿತ್ತು . ವಿಚಾರಣೆ ನಡೆಸಿದ ನ್ಯಾಯಾಲಯ ಕೆರೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತು. ಅದರಂತೆ ಸರ್ವೆ ಮಾಡಿದ್ದು, 3 ಎಕರೆ ಒತ್ತುವರಿ ಆಗಿರುವುದು ದೃಢಪಟ್ಟಿದೆಎಂದು ತಿಳಿಸಿದ್ದಾರೆ.

ಆ ಒತ್ತುವರಿ ಜಾಗದಲ್ಲಿ ಕನ್ನಡ ಭವನ, ತೋಟಗಾರಿಕೆ ಇಲಾಖೆ ಕಟ್ಟಡ, ಸಾರ್ವಜನಿಕ ವಿದ್ಯಾರ್ಥಿ ನಿಲಯ, ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ. ಈಗ ಅಂಬೇಡ್ಕರ್ ಭವನ ನಿರ್ಮಿಸುವುದಾಗಿ ಶಾಸಕರು ಘೋಷಿಸಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ತಡೆಯಾಜ್ಞೆ ನೀಡಲಾಗಿದೆ.

‘ಈ ಕಾರಣದಿಂದ ಶಾಸಕರು ತಮ್ಮ ಬೆಂಬಲಿತರಾದ ಸೂಲಿಕುಂಟೆ ರಮೇಶ್, ಹುಣಸನಹಳ್ಳಿ ವೆಂಕಟೇಶ್, ಚಿಕ್ಕನಾರಾಯಣ, ಮಣಿವಣ್ಣನ್ ಸೇರಿಸಿ ನನ್ನ ಮನೆ ಮುಂದೆ ಧರಣಿ ಮಾಡುವ ಬೆದರಿಕೆ ಹಾಕಿದ್ದಾರೆ. ಜತೆಗೆ ಅ.19ರ ಒಳಗೆ ಇತ್ಯರ್ಥವಾಗದಿದ್ದಲ್ಲಿ ಬಂಗಾರಪೇಟೆ ಬಂದ್‌ಗೆ ಕರೆ ನೀಡುವುದಾಗಿ ಧಮಕಿ ಹಾಕಿದ್ದಾರೆ’ ಎಂದು ಶ್ರೀಧರ್‌ ಮೂರ್ತಿ ದೂರಿದ್ದಾರೆ.

‘ನನಗೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದು ಅದಕ್ಕೆ ಶಾಸಕ ಹಾಗೂ ಬೆಂಬಲಿಗರು ನೇರ ಹೊಣೆ ಆಗಿರುತ್ತಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT