ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ಲಕ್ಷಣ ಕಾಣಿಸಿಕೊಂಡಾಗ ಚಿಕಿತ್ಸೆ ಕೊಡಿಸಿ

ವಿಶ್ವ ಚಿತ್ತ ವಿಕಲತೆ ದಿನಾಚರಣೆ ಸಿಇಒ ಜಿ.ಜಗದೀಶ್ ಸಲಹೆ
Last Updated 27 ಮೇ 2019, 12:05 IST
ಅಕ್ಷರ ಗಾತ್ರ

ಕೋಲಾರ: ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಗಂಭೀರವಾಗುವುದನ್ನು ತಡೆದು ಸೂಕ್ತ ಚಿಕಿತ್ಸೆ ಕೊಡಿಸಿದರೆ ನಿಯಂತ್ರಣಗೊಳಿಸಬಹುದು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಚಿತ್ತ ವಿಕಲತೆ ದಿನ ಕಾರ್ಯಕ್ರಮಲ್ಲಿ ಮಾತನಾಡಿ, ನಮ್ಮ ಮದ್ಯೆಯೇ ಇರುವ ಚಿತ್ತ ವಿಕಲರನ್ನು ಗುರುತಿಸಿ ಅವರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗುವಂತೆ ಪ್ರೇರೇಪಿಸುವ ಕಾರ್ಯದಲ್ಲಿ ಆರೋಗ್ಯ ಇಲಾಖೆ ಜತೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಚಿತ್ತ ವಿಕಲತೆ ಎಂಬ ಹೆಸರೇ ಅನೇಕರಿಗೆ ತಿಳಿದಿಲ್ಲ. ಈ ಕುರಿತು ಜನರಲ್ಲಿ ಜಾಗೃತಿಗೊಳಿಸುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು. ಚಿತ್ತ ವಿಲಕತೆ ಯಾವ ಕಾರಣಗಳಿಗಾಗಿ ಬರುತ್ತದೆ. ರೋಗ ಲಕ್ಷಣಗಳು ಏನು ಎಂಬುದನ್ನು ತಿಳಿದುಕೊಂಡರೆ ಪರಿಸ್ಥಿತಿ ಗಂಭೀರವಾಗುವುದನ್ನು ತಡೆದು ಸೂಕ್ತ ಚಿಕಿತ್ಸೆ ಕೊಡಿಸಿದರೆ ವಿತ್ತ ವಿಕಲತೆಯುಳ್ಳ ವ್ಯಕ್ತಿಯೂ ಸಾಮಾನ್ಯರಂತೆ ಜೀವನ ನಡೆಸಬಹುದು' ಎಂದರು.

ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಇರುವ ಚಿತ್ತ ವಿಕಲರನ್ನು ಗುರುತಿಸಿ ಚಿಕಿತ್ಸೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಬೇಕು. ಲಕ್ಷಣಗಳು ಕಾಣಿಸಿಕೊಂಡಾಗ ಕೇವಲವಾಗಿ ಪರಿಗಣಿಸದೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಸಲಹೆ ನೀಡಿದರು.

ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವನವಿಡೀ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗಂಭೀರವಾದ ಮಾನಸಿಕ ಅಸ್ವಸ್ಥ ಕಾಯಿಲೆ. ಚಿತ್ತ ವಿಕಲತೆ ಕಾಯಿಲೆ ಬಗ್ಗೆ ಜನರಿಗೆ ಪರಿಚಯಿಸುವ ಸಲುವಾಗಿ ವಿಶ್ವಾದಾದ್ಯಂತ ಮೇ 24ರಂದು ವಿಶ್ವ ಚಿತ್ತ ವಿಕಲತೆ ದಿನವನ್ನು ಆಚರಿಸಲಾಗುತ್ತಿದೆ ಎಂದು ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಲಕ್ಷ್ಮಯ್ಯ ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಮಾತನಾಡಿ, ವಿತ್ತ ವಿಕಲತೆ ಎಂಬುದು ಮಾನಸಿಕ ಕಾಯಿಲೆ. ಒಳಗಾದವರಿಗೆ ಮುಖ್ಯವಾಗಿ ತಂದೆತಾಯಿಗಳಿಂದ ಪ್ರೀತಿ, ವಾತ್ಸಯ್ಯ ಸಿಗಬೇಕು. ಮೂಢನಂಬಿಕೆಯಿಂದ ರೋಗ ವಾಸಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

15 ರಿಂದ 25 ವರ್ಷದೊಳಗಿನವರಲ್ಲಿ ಹೆಚ್ಚು ಕಂಡುಬರುತ್ತದೆ. ಕುಟುಂಬದಲ್ಲಿನ ಸಂಕಷ್ಟದ ಪರಿಸ್ಥಿತಿ, ಹೆತ್ತವರನ್ನು ಕಳೆದುಕೊಂಡು ಮಕ್ಕಳು ತೀವ್ರ ಖಿನ್ನತೆಗೆ ಒಳಗಾದರೆ, ಶೈಕ್ಷಣಿಕ ಹಿನ್ನಡೆ ಹೀಗೆ ನಾನಾ ಕಾರಣಗಳಿಂದ ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದರು.

ಚಿತ್ತ ವಿಕಲರಲ್ಲಿ ಆಲೋಚನೆಯಲ್ಲಿ ಏರುಪೇರು, ತರ್ಕಬದ್ಧ, ಅರ್ಥ ಇಲ್ಲದ ಆಲೋಚನೆ, ಇದ್ದಕ್ಕಿಂದ್ದಂತೆಯೇ ನುಗುವುದು, ಅಳುವುದು, ರೇಗಾಡುವುದು ರೋಗದ ಪ್ರಮುಖ ಲಕ್ಷಣಗಳು.ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸರಳ ಹಾಗೂ ಪರಿಣಾಮಕಾರಿಯಾದ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 5,446 ಚಿತ್ತ ವಿಕಲತೆಯ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ 1,340 ಹೊಸ ಪ್ರಕರಣಗಳಾಗಿದೆ, 4106 ಹಳೇ ಪ್ರಕರಣಗಳು. 283 ಹೊಸ ಪ್ರಕರಣ ಹಾಗೂ 296 ಹಳೇ ಪ್ರಕರಣ ಸೇರಿ 579 ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ನಿಮ್ಹಾನ್ಸ್ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಚಿಕಿತ್ಸಾ ವಿಧಾನವನ್ನು ಬಲವರ್ಧನೆಗೊಳಿಸಲು ಇಲಾಖೆಯಿಂದ ವೈದ್ಯ, ಸಿಬ್ಬಂದಿಗಳಿಗೆ ತರಬೇತಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಎಸ್‍ಎನ್‍ಆರ್ ಆಸ್ಪತ್ರೆಯ ಜಿಲ್ಲಾ ಮನೋರೋಗ ತಜ್ಞೆ ಡಾ.ಪಾವನ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯಕುಮಾರ್, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಚಂದನ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ, ಆಶ್ರಿತ ರೋಗವಾಹನ ನಿಯಂತ್ರಣಾಧಿಕಾರಿ ಡಾ.ಚಾರಿಣಿ, ಎಸ್‍ಎನ್‍ಆರ್ ಆಸ್ಪತ್ರೆಯ ವೈದ್ಯೆ ಡಾ.ಶಿಲ್ಪ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT