ಕೋಲಾರ: ‘ಕೋಚಿಮುಲ್ ಕುರಿತಾಗಿ ಹಿಂದೆ ಹೇಳಿರುವ ಹಾಗೆ ಅಲ್ಲಿ ಅವ್ಯವಹಾರ ನಡೆಸಿರುವ ವ್ಯವಕ್ತಿಗಳ ವಿರುದ್ಧ ಶೀಘ್ರದಲ್ಲೆ ದಾಖಲೆಗಳನ್ನು ಬಿಡುಗಡೆಗೊಳಿಸುತ್ತೆನೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಡಿಸಿಸಿ ಬ್ಯಾಂಕ್, ಕೋಚಿಮುಲ್ ವಿರೋಧಯಲ್ಲ, ಅಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿರುವ ವ್ಯಕ್ತಿಗಳ ನನ್ನ ಹೋರಾಟ’ ಎಂದರು.
‘ನಂಜೇಗೌಡರ ಕ್ರಷರ್ಗಳ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಬರುವುದಕ್ಕೆ ಮುಂಚೆಯೇ ದಾಖಲಾಗಿರುವ ಪ್ರಕರಣಗಳು. ಎಲ್ಲೆಲ್ಲಿ ಬೆಟ್ಟ ನುಂಗಿದ್ದಾರೆ, ಯಾವುದು ಅಧಿಕೃತ, ಯಾವುದು ಅನಧಿಕೃತ, ಯಾವುದಕ್ಕೆ ₨ ೯೨ ಕೋಟಿ ರಾಯಲ್ಟಿ ಕಟ್ಟಬೇಕು, ಎನ್ನುವುದು ಎಲ್ಲವೂ ಗೊತ್ತಿದೆ’ ಎಂದರು.
‘ನಾನು ಕಸ ಗುಡಿಸುವುದಕ್ಕೂ, ಪುಟ್ಪಾತ್ನಲ್ಲಿ ಇರುವುದಕ್ಕೆ, ಏಸಿ ಕಚೇರಿಯಲ್ಲಿ ಇರುವುದಕ್ಕೆ ಎಲ್ಲದಕ್ಕೂ ಸೈ. ಹಿಂದಿನ ಸಂಸದರು ೨೭ ವರ್ಷ ಯಾಕೆ ಕಸ ಗುಡಿಸಲಿಕ್ಕೆ ಬರಲಿಲ್ಲ’ ಎಂದು ಪ್ರಶ್ನಿಸಿದರು.
‘ಎಲ್ಲ ಕೆಲಸಗಳನ್ನು ಮಾಡಿದಾಗಲೇ ಜನನಾಯಕರಾಗಲು ಸಾಧ್ಯ. ಆದರೆ, ಆಕಸ್ಮಿಕವಾಗಿ ಶಾಸಕರಾಗಿರುವವರಿಗೆ ಇವೆಲ್ಲವೂ ಅರ್ಥವಾಗುವುದಿಲ್ಲ. ನಂಜೇಗೌಡರು ನನಗೆ ಟಾರ್ಗೆಟ್ ಅಲ್ಲ, ಆದರೆ ಅವರೇ ಇಲ್ಲಸಲ್ಲದ್ದನ್ನು ಮೇಲೆ ಹಾಕಿಕೊಳ್ಳುತ್ತಿದ್ದಾರೆ. ಒಟ್ಟಾರೆ ಎಲ್ಲಾ ಸೇರಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಮುಂದಾಗಿದ್ದೇವೆ’ ಎಂದು ಹೇಳಿದರು.
‘ಚುನಾವಣೆಯಲ್ಲಿ ಸ್ಪರ್ಧೆ ಮಾಡುವಾಗ ಮಾತ್ರವೇ ನಾನು ಬಿಜೆಪಿ ಅಭ್ಯರ್ಥಿ, ಗೆದ್ದ ಬಳಿಕ ಪ್ರತಿಯೊಬ್ಬರನ್ನೂ ಕುಟುಂಬದಂತೆ ಕಾಣುತ್ತಿದ್ದೇನೆ. ಪಕ್ಷಾತೀತವಾಗಿ ಜತೆಯಲ್ಲಿ ಕರೆದುಕೊಂಡು ಹೋಗಲು ಶ್ರಮಿಸುತ್ತಿದ್ದೇನೆ. ಆದರೆ ಹಿಂದೆ ಮಾಡಿರುವ ತಪ್ಪುಗಳಿಂದಾಗಿ ಹಾಗೂ ಸೋತ ಹತಾಶೆಯಲ್ಲಿ ಭ್ರಮೆಯಿಂದ ನನ್ನ ವಿರುದ್ಧ ಇಲ್ಲಸಲ್ಲದ್ದನ್ನು ಹೇಳುತ್ತಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.
ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಪದಾಧಿಕಾರಿಗಳಾದ ಮಾಗೇರಿ ನಾರಾಯಣಸ್ವಾಮಿ, ವಿಜಯ್ಕುಮಾರ್ ಹಾಜರಿದ್ದರು.