ಮಾಲೂರು: ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಸೋಮವಾರ ನಡೆಯಲಿರುವ ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ವಿಶೇಷ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ದೇವಾಲಯವು ಚೋಳರ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ರಾಜ್ಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯವರು ಸುಮಾರು 900 ನೂರು ವರ್ಷಗಳ ಹಿಂದಿನ ದೇವಾಲಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಗರ್ಭಗುಡಿಯಲ್ಲಿರುವ ಮೂಲ ಮೂರ್ತಿಯು ಒಂದೂವರೆ ಅಡಿ ಪದ್ಮ ಪೀಠದ ಮೇಲೆ ಮೂರುವರೆ ಅಡಿ ಎತ್ತರವಿರುವ ದಿವ್ಯ ಮಂಗಳ ಮೂರ್ತಿಯು ಎಂತಹ ನಾಸ್ತಿಕರನ್ನು ಸಹ ಆಸ್ತಿಕರನ್ನಾಗಿ ಮಾಡುತ್ತದೆ. ವೆಂಕಟೇಶ್ವರನ ಎಡ ಮತ್ತು ಬಲ ಭಾಗಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರನ್ನು ಕಾಣಬಹುದು.
ಪುಷ್ಯ ಮಾಸದಲ್ಲಿ ಬರುವ ವೈಕುಂಠ ಏಕಾದಶಿಯಂದು ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಮಿಗೆ ವಿಶೇಷ ಅಲಂಕಾರ, ತಿರುಮಂಜನ ವಜ್ರವೈಡೂರ್ಯ ಭರಿತ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ನಂತರ ಸಿಂಗರಿಸಿದ ಉತ್ಸವ ಮೂರ್ತಿಗಳನ್ನು ವೈಕುಂಠ ದ್ವಾರದಲ್ಲಿ ಉಯ್ಯಾಲೆಯ ಮಣೆಯ ಮೇಲೆ ಕೂರಿಸಿ ಆಸ್ಥಾನ ಸೇವೆಯನ್ನು ನಡೆಸಲಾಗುತ್ತದೆ. ದೇವಾಲಯದ ಪ್ರಧಾನ ಅರ್ಚಕ ರವಿ ವಿಧಿ ವಿಧಾನಗಳ ನೇತೃತ್ವವಹಿಸಿದ್ದಾರೆ.
ರಾಜ್ಯದ ನಾನಾ ಭಾಗಗಳು ಸೇರಿದಂತೆ ನೆರೆಯ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಪಟ್ಟಣ ಸೇರಿದಂತೆ ಹೊಸಕೋಟೆ, ಸರ್ಜಾಪುರ, ಆನೇಕಲ್ ಮತ್ತು ಬೇರಕಿಯಿಂದ ಕಾಲ್ನಡಿಗೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
ದೇಗುಲದಲ್ಲಿ ಪ್ರತಿ ನಿತ್ಯ ಭಕ್ತರಿಗೆ ಅನ್ನ ಸಂತರ್ಪಣೆ ಕಲ್ಪಿಸಲಾಗಿದೆ. ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡರ ಸಂಕಲ್ಪದಂತೆ ದೇವಾಲಯದ ಮುಂಭಾಗದಲ್ಲಿ 101 ಅಡಿ ಎತ್ತರದ ರಾಜಗೋಪುರ, ಆವರಣ ತೆರವು ಹಾಗೂ ಕಾಂಪೌಂಡ್ ಕಾಮಗಾರಿ ಆರಂಭಗೊಂಡಿದ್ದು, ಹಾಲಿ ಶಾಸಕರಾದ ಕೆ.ವೈ.ನಂಜೇಗೌಡರು ಕೈ ಜೋಡಿಸಿ ಕಾಮಗಾರಿಗಳನ್ನು ಮುಂದುವರೆಸುತ್ತಿರುವುದು ಭಕ್ತರ ಮೆಚ್ಚುಗೆಗೆಗ ಪಾತ್ರವಾಗಿದೆ.
ಮುಜರಾಯಿ ಇಲಾಖೆಗೆ ಒಳಪಟ್ಟಿರುವ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯಂದು ಶ್ರೀಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹರಿಕೆ ಹೊತ್ತ ಭಕ್ತರಿಗೆ ಮುಡಿ ನೀಡಲು ಕುರುಳು ಕಟ್ಟೆ, ಸ್ನಾನದ ಗೃಹಗಳ ಸೌಕರ್ಯವನ್ನು ಸಹ ಕಲ್ಪಿಸಲಾಗಿದೆ ಎಂದು ದೇವಾಲಯ ಕಾರ್ಯನಿರ್ವಾಣಾಧಿಕಾರಿ ನರಸಿಂಹಯ್ಯ ಮಾಹಿತಿ ನೀಡಿದರು.
ವೈಕುಂಠ ಏಕಾದಶಿಯಂದು 1 ಲಕ್ಷ ಕಿಂತಲು ಹೆಚ್ಚು ಭಕ್ತರು ಶ್ರೀದೇವಿ ಭೂದೇವಿ ಸಮೇತ ಅಭಯ ಹಸ್ತ ಉಳ್ಳ ಸ್ವಾಮಿ ದರ್ಶನ ಪಡೆಯುತ್ತಾರೆ ಎಂದು ದೇವಾಲಯದ ಪ್ರಧಾನ ಅರ್ಚಕ ಜೆ.ನರಸಿಂಹ ಮೂರ್ತಿ ತಿಳಿಸಿದರು.
ಗ್ರಾ.ಪಂ.ಪಿಡಿಒ ಎಂ.ವಿ.ಮುನಿವೆಂಕಟಪ್ಪ ಮಾತನಾಡಿ, ಪಂಚಾಯಿತಿಯಿಂದ ಎಸ್ಸಿಪಿ ಯೋಜನೆ ಅಡಿ ಅತ್ಯಾಧುನಿಕ ಶೌಚಾಲಯ, ಸ್ನಾನದ ಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಭಕ್ತರ ಸೇವೆಗೆ ಸಜ್ಜಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಮೂಲ ಸೌಕರ್ಯಕ್ಕೆ ಒತ್ತು
ದೇವಾಲಯ ಸಮಿತಿ ಅಧ್ಯಕ್ಷನಂದನ್ ವಿ.ಗೌಡ ಹೇಳುವಂತೆ ಭಕ್ತರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ₹ 1 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಸ್ವಾಮಿಯ ದರ್ಶನ ಪಡೆಯಲು ಸರತಿ ಸಾಲಿನ ಕಂಬಿಗಳನ್ನು ಸುಮಾರು ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿಯಿಂದ ₹ 30 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಅನ್ನದಾಸೋಹ ಖಾತೆಗೆ ₹ 1.99 ಕೋಟಿ
ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ 3 ವರ್ಷದ ಹಿಂದೆ ದೇವಾಲಯದ ವ್ಯವಸ್ಥಾಪನ ಸಮಿತಿಯ ಕೆಲವು ಸದಸ್ಯರು ಶನಿವಾರ ದೇವಾಯಕ್ಕೆ ಬರುವ ಭಕ್ತರಿಗೆ ಮಾತ್ರ ಅನ್ನ ದಾಸೋಹ ಕಾರ್ಯಕ್ರಮ ಆರಂಭಿಸಿದ್ದರು. ಕೇವಲ ₹ 10ಸಾವಿರ ಹಣದಿಂದ ಆರಂಭಿಸಲಾಗಿತ್ತು. ಮೂರು ವರ್ಷ ಮುಗಿಯುವಷ್ಟರಲ್ಲಿ ಅನ್ನದಾಸೋಹ ಖಾತೆಗೆ ₹ 1.99 ಕೋಟಿ ಹಣ ಸಂದಾಯವಾಗಿದೆ. ಇದು ಸಾರ್ವಜನಿಕರಲ್ಲಿ ಹುಬ್ಬೆರಿಸುವಂತೆ ಮಾಡಿದೆ ಎನ್ನುತ್ತಾರೆ ದೇವಾಲಯ ಸಮಿತಿ ಸದಸ್ಯವೆಂಕಟೇಶ ಗೌಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.