ಮುಳಬಾಗಿಲು: ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸದ ಮಿತಿ ಹೆಚ್ಚಳ, ಕಾರ್ಖಾನೆ ಕಾಯ್ದೆ ತಿದ್ದುಪಡಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ನಿಂದ ಗುರುವಾರ ತಾಲ್ಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
ಕೈಗಾರಿಕ ವಿವಾದಗಳ ಕಾಯ್ದೆಗೆ ತಿದ್ದುಪಡಿ ಹಾಗೂ ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಪರವಾನಗಿ ಮಿತಿ 20 ರಿಂದ 50ಕ್ಕೆ ಹೆಚ್ಚಳ ಮಾಡುವ ತಿದ್ದುಪಡಿ ಸುಗ್ರೀವಾಜ್ಞೆ ಕೈಬಿಡಬೇಕು. 2020-21 ರ ಸಾಲಿನ ವ್ಯತ್ಯಾಸದ ತುಟ್ಟಿ ಭತ್ಯೆಯನ್ನು ಸರ್ಕಾರಿ ನೌಕರರಿಗೆ ತಕ್ಷಣ ನೀಡಬೇಕು. ಕನಿಷ್ಠ ವೇತನ ₹ 21 ಸಾವಿರ ನಿಗದಿ ಮಾಡಬೇಕು. ಲಾಕ್ಡೌನ್ ವೇಳೆ ಅವಧಿಯ ವೇತನವನ್ನು ಕಾರ್ಮಿಕರಿಗೆ ಸಂಪೂರ್ಣವಾಗಿ ಪಾವತಿಸಬೇಕು.ಲಾಕ್ಡೌನ್ ಅವಧಿಯಲ್ಲಿನ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ಹೆಚ್ಚಳ ಮುಂದೂಡಬಾರದು. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ಟಿ ತಕ್ಷಣ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಬಳಿಕಉಪ ತಹಶೀಲ್ದಾರ್ ಕೆ.ಎಲ್. ಜಯರಾಮ್ ಅವರಿಗೆ ಮನವಿ ಸಲ್ಲಿಸಿದರು.
ಸಿಐಟಿಐ ಜಿಲ್ಲಾ ಸಮಿತಿ ಸದಸ್ಯೆ ಆಶಾ, ತಾಲ್ಲೂಕು ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಪುಣ್ಯಹಳ್ಳಿ ಶಂಕರ್, ಎಸ್ಎಫ್ಐ ಜಿಲ್ಲಾಧ್ಯಕ್ಷ ಅಂಬ್ಲಿಕಲ್ ಶಿವಪ್ಪ, ದಸಂಸ ಮುಖಂಡ ಡಾ. ಸಂಗಸಂದ್ರ ವಿಜಯಕುಮಾರ್, ಮುಖಂಡರಾದದ ರಮೇಶ್, ಸರೋಜಮ್ಮ, ಯಲ್ಲಪ್ಪ, ಎಂ. ನಾಗಪ್ಪ, ಶ್ರೀನಿವಾಸ್ ಭಾಗವಹಿಸಿದ್ದರು.