ಕೋಲಾರ: ‘ಸಮಾಜದಲ್ಲಿ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಹೆಚ್ಚುತ್ತಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಕಳವಳ ವ್ಯಕ್ತಪಡಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇಲ್ಲಿನ ಸರ್ಕಾರಿ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೆಣ್ಣು ಮಕ್ಕಳ ಆತ್ಮರಕ್ಷಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ’ ಎಂದರು.
‘ಇಲಾಖೆಯಿಂದ ಹಮ್ಮಿಕೊಂಡಿರುವ ಈ ತರಬೇತಿ 15 ದಿನ ನಡೆಯಲಿದೆ. ವಿದ್ಯಾರ್ಥಿನಿಯರು ತರಬೇತಿಯಲ್ಲಿ ಪಾಲ್ಗೊಂಡು ಆತ್ಮರಕ್ಷಣೆಯ ಕಲೆ ಕಲಿಯಬೇಕು. ಜೀವನದಲ್ಲಿ ಕಷ್ಟದ ಸಂದರ್ಭವನ್ನು ಆತ್ಮಸ್ಥೈರ್ಯ ಹಾಗೂ ಧೈರ್ಯದಿಂದ ಎದುರಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಮೃದು ಸ್ವಭಾವದ ಹೆಣ್ಣು ಮಕ್ಕಳು ಬೇಗನೆ ಮೋಸ ಹೋಗುವ ಸಾಧ್ಯತೆ ಹೆಚ್ಚು. ಪರೀಕ್ಷೆಗಳಲ್ಲಿ ಅಂಕ ಕಡಿಮೆ ಬಂದರೂ ಧೃತಿಗೆಟ್ಟು ಆತ್ಮಹತ್ಯೆ ಮಡಿಕೊಳ್ಳುತ್ತಾರೆ. ಆದ ಕಾರಣ ಪೋಷಕರು ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು’ ಎಂದು ಈ ನೆಲ ಈ ಜಲ ಸಂಸ್ಥೆ ಕಲಾವಿದ ವೆಂಕಟಾಚಲಪತಿ ಸಲಹೆ ನೀಡಿದರು.
ತರಬೇತುದಾರರಾದ ರುಮಾನ ಕೌಸರ್ ಮತ್ತು ಗಂಗಾಧರ್ ಅವರು ಆತ್ಮರಕ್ಷಣೆ ಕುರಿತು ತರಬೇತಿ ನೀಡಿದರು. ವಿದ್ಯಾರ್ಥಿನಿಲಯದ ವಾರ್ಡನ್ ಮಂಜುಳಾ ಹಾಜರಿದ್ದರು.