ಶ್ರೀನಿವಾಸಪುರ: ಯುವ ಸಮುದಾಯ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು. ದೇಶ ಕಟ್ಟುವ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ.ಕೆ.ಎನ್. ವೇಣುಗೋಪಾಲ್ ಹೇಳಿದರು.
ಪಟ್ಟಣದ ಸಾಯಿ ವಿಜಯ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಆಚರಣಾ ಸಮಿತಿ ಹಾಗೂ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಹಾಗೂ ಧೈರ್ಯಕ್ಕೆ ವಿವೇಕಾನಂದರು ಹೆಸರಾಗಿದ್ದಾರೆ. ಅವರ ಅನುಸರಿಸಿದ ಮಾನವ ಧರ್ಮ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.
ಶ್ರೀನಿವಾಸಪುರ ರೋಟರಿ ಸೆಂಟ್ರಲ್ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಸಮಿತಿ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆ ಕಂಗೆಟ್ಟಿರುವ ಜಗತ್ತಿಗೆ ದಾರಿದೀಪವಾಗಿದೆ. ಮಾನವೀಯ ನೆಲೆಯಲ್ಲಿ ಜಗತ್ತನ್ನು ಬೆಸೆಯುವ ಶಕ್ತಿ ಅವರಲ್ಲಿತ್ತು. ಆದ್ದರಿಂದಲೇ ಅವರು ಜಗತ್ತಿನ ಎಲ್ಲ ಧರ್ಮೀಯರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಎಂ. ವೇಮಣ್ಣ ಹಾಗೂ ಕಾರ್ಯದರ್ಶಿ ಕೆ. ದಿವಾಕರ್ ಅವರನ್ನು ಸನ್ಮಾನಿಸಲಾಯಿತು. ಸಾಯಿ ವಿಜಯ ಕಾಲೇಜಿನ ಪ್ರಾಂಶುಪಾಲ ರಾಮಾಂಜಿ, ರೋಟರಿ ಸಂಸ್ಥೆಯ ನಿರ್ದೇಶಕ ಎಂ. ಬೈರೇಗೌಡ, ರಾಚೆಲ್ ಶಾಲೆಯ ಕಾರ್ಯದರ್ಶಿ ಮುನಿಶಾಮಿರೆಡ್ಡಿ, ಭರತ್, ಗೋವಿಂದಪ್ಪ, ನಂದೀಶ್ ಇದ್ದರು.