ಕೋಲಾರ: ‘ಕಾಂಗ್ರೆಸ್ನಿಂದ ಫಲಾನುಭವಿಗಳು ಸಾಕಷ್ಟು ಮಂದಿ ಇದ್ದೇವೆ. ಸಂಪನ್ಮೂಲ ಮಾಡಿಕೊಂಡಿದ್ದೇವೆ. ಉತ್ತಮ ಸ್ಥಾನಕ್ಕೇರಿ, ದೊಡ್ಡ ಹುದ್ದೆ ಅನುಭವಿಸಿದ್ದೇವೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ಸ್ಪೀಕರ್, ಮಂತ್ರಿ ಆದೆ’ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಶುಕ್ರವಾರ ಇಲ್ಲಿ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಎಲ್ಲಾ ಸಾಧನೆಗೆ ಜನ, ಕಾಂಗ್ರೆಸ್, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕಾರಣ. ಅವರ ಋಣ ತೀರಿಸಿಕೊಳ್ಳಬೇಕು ಎಂಬುದಾಗಿ ಬೆಂಗಳೂರಿನಲ್ಲಿ ಹೇಳಿದ್ದೆ. ಆ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದರು.
‘ನನಗೆ ಹಲವು ನಾಯಕರು ಹಲವು ಬಿರುದು ನೀಡಿದ್ದಾರೆ. ನಾಯಿ, ನರಿ, ಶಕುನಿ, ದುರ್ಯೋಧನ, ಉತ್ತರಕುಮಾರ ಎಂಬುದಾಗಿ ಕರೆದಿದ್ದಾರೆ. ಅವರಿಗೆ ನನ್ನ ದೀರ್ಘದಂಡ ಪ್ರಣಾಮಗಳು. ಇನ್ನೂ ಇದೇ ರೀತಿ ಬಿರುದು ಕೊಟ್ಟರೆ ಸಂತೋಷ’ ಎಂದು ಹೇಳಿದರು.