ಕೋಲಾರ: ‘ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಅದಕ್ಕೆ ತಕ್ಕಂತೆ ಅಧಿಕಾರಿಗಳು, ಸಿಬ್ಬಂದಿ ಹೊಂದಿಕೊಂಡು ಸೇವೆ ಸಲ್ಲಿಸಬೇಕು’ ಎಂದು ಭಾರತೀಯ ಅಂಚೆ ಸೇವೆಗಳ ಹೆಚ್ಚುವರಿ ನಿರ್ದೇಶಕ ಡಿ.ಎಸ್.ವಿ.ಆರ್.ಮೂರ್ತಿ ಸಲಹೆ ನೀಡಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಅಖಿಲ ಭಾರತ ಅಂಚೆ ನೌಕರರ ಪರಿಶಿಷ್ಟ ಜಾತಿ, ವರ್ಗಗಳ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ೧೧ನೇ ವಲಯ ಮಟ್ಟದ ಮಹಾ ಅಧಿವೇಶನ ಹಾಗೂ ಕೋಲಾರ ವಿಭಾಗೀಯ ವಾರ್ಷಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
‘ಸಿಬ್ಬಂದಿಯು ಸಂಘಟನೆಯನ್ನು ಮಾಡಿಕೊಂಡಿರುವುದು ಸಂತಸದ ‘ಅಧಿಕಾರಿಗಳಿಗೆ ಏನೇ ಸಮಸ್ಯೆ ಬಂದಾಗ ಎಲ್ಲರೂ ಕೈಜೋಡಿಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಇಲಾಖೆಯ ನೌಕರರು ಸಂಘಟನೆಯನ್ನು ಬಲಪಡಿಸಿಕೊಳ್ಳಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.
ಭಾರತೀಯ ಅಂಚೆ ಸೇವೆಗಳ ಎಸ್ಎಸ್ಆರ್ಎಂ ಸಂದೇಶ್ ಮಹದೇವಪ್ಪ ಮಾತನಾಡಿ, ‘ಅಂಬೇಡ್ಕರ್ ಅವರು ಸಮಾಜದಲ್ಲಿ ಯಾವ ವರ್ಗದವರನ್ನು ವಿಭಜನೆ ಮಾಡಿಲ್ಲ. ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಪರ, ವಿರೋಧಗಳು ವ್ಯಕ್ತವಾಗುತ್ತಿವೆ. ಸದ್ಯ ಪೌರತ್ವ ಕಾಯಿದೆ ಕುರಿತಾಗಿಯೂ ಪರ, ವಿರೋಧ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿದ್ದು, ಅಂಬೇಡ್ಕರರ ಆಶಯ ಅರ್ಥ ಮಾಡಿಕೊಳ್ಳದೇ ಇರುವುದು ದುರಂತ’ ಎಂದು ತಿಳಿಸಿದರು.
‘ಪ್ರತಿಯೊಬ್ಬರೂ ನಿರಂತರ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ತೋರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿರುವಂತೆಯೇ ಓದು, ಜ್ಞಾನ ಎನ್ನುವುದು ಇಲ್ಲದೆ ಇದ್ದರೆ ನೀವು ಯಾವುದನ್ನೂ ಪ್ರಶ್ನೆ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಜ್ಞಾನ ಪಡೆದುಕೊಳ್ಳಿ’ ಎಂದು ಹೇಳಿದರು.
‘ಕೆಲ ಸಂಘಟನೆಗಳನ್ನು ವೈಯಕ್ತಿಕ ಕಾಲಘಟ್ಟಕ್ಕೆ, ಮೆಮೊಂಟೋಗಳಿಗೆ ಮಾತ್ರವೇ ಸೀಮಿತ ಮಾಡಿಕೊಂಡಿರುವ ಮುಖಂಡರಾಗಿರುತ್ತಾರೆ. ಅಂಬೇಡ್ಕರ್ ಅವರನ್ನು ನಾವು ಸರಿಯಾಗಿ ಬಳಸಿಕೊಳ್ಳದ ಕಾರಣ ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ತಿಳಿಸಿದರು.
ಎಸ್ಸಿ, ಎಸ್ಟಿ ನೌಕರರ ಸಂಘದ ವಲಯ ಅಧ್ಯಕ್ಷ ಮದಿಅಳಗನ್, ಉತ್ತರ ಕರ್ನಾಟಕ ವಲಯದ ನಿವೃತ್ತ ಡಿಪಿಎಸ್ ಸಣ್ಣನಾಯಕ್, ದೆಹಲಿಯ ಎಸ್ಸಿ, ಎಸ್ಟಿ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಅಹೀರ್ವರ್, ಸಲಹೆಗಾರ ವೇಣುಗೋಪಾಲ್, ತಮಿಳುನಾಡಿನ ವಲಯ ಕಾರ್ಯದರ್ಶಿ ಪಳನಿರಾಜನ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.