ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢ ಪ್ರಜಾಪ್ರಭುತ್ವ ರಚನೆಗೆ ಹೆಚ್ಚಿನ ಮತದಾನ ಅಗತ್ಯ

ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ
Last Updated 11 ಏಪ್ರಿಲ್ 2019, 14:29 IST
ಅಕ್ಷರ ಗಾತ್ರ

ಕೊಪ್ಪಳ‌: ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೆದ್ದಪ್ಪಯ್ಯ ಹೇಳಿದರು.

ನಗರದ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿಯ ಆಶ್ರಯದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಬಾರಿ ಶೇ 65ರಷ್ಟು ಮತದಾನ ಆಗಿತ್ತು. ಆದರೆ ಈ ಬಾರಿಶೇ 100ರಷ್ಟು ಮತದಾನದ ಗುರಿ ಹೊಂದಲಾಗಿದೆ. ಅಂದಾಗ ಮಾತ್ರ ದೇಶದಲ್ಲಿ ಸದೃಢ ಪ್ರಜಾಪ್ರಭುತ್ವ ನಿರ್ಮಾಣ ಆಗುತ್ತದೆ ಎಂದರು.

ಇವಿಎಂನಲ್ಲಿ ಸಮಸ್ಯೆ ಇದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ವಿವಿ ಪ್ಯಾಟ್ ಎಂಬ ಮತ ಖಾತ್ರಿ ಯಂತ್ರವನ್ನು ಇಡಲಾಗುತ್ತದೆ. ವಿವಿಧ ಇಲಾಖೆಗಳ ಸಹಕಾರದಿಂದ ಮಾನವ ಸರಪಳಿ, ಜಾಗೃತಿ ಜಾಥಾ ಹಾಗೂ ಸೈಕಲ್, ಬೈಕ್ ರಾಲಿ ಮಾಡುವ ಮೂಲಕ ಮತದಾನದ ಅರಿವು ಮೂಡಿಸಲಾಗುತ್ತಿದೆ. 23ರ ವರೆಗೂ ಈ ಕಾರ್ಯಕ್ರಮ ಮುಂದುವರೆಯಲಿದೆ. ಜಿಂಗಲ್ ಪ್ಲೇ, ಆಸ್ಪತ್ರೆ, ಅಂಚೇ ಕಚೇರಿ ಹಾಗೂ ಕಚೇರಿಗಳಲ್ಲಿ ಎಲ್ಲ ರೀತಿಯಲ್ಲಿ ಮತದಾನ ಕುರಿತು ಮಾಹಿತಿ ಒದಗಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಇಂನ್ಸ್ಟಾ ಗ್ರಾಮ್, ಫೇಸ್ ಬುಕ್,‌ ವಾಟ್ಸ್ ಆ್ಯಪ್ ಮೂಲಕವು ಜಾಗೃತಿ ಅಭಿಯಾನ ನಡೆಸಲಾತ್ತಿದೆ‌ ಎಂದರು.

1950ರಲ್ಲಿ ಚುನಾವಣೆ ಆಯೋಗ ಜಾರಿಯಾಯಿತು. ಅದಕ್ಕಾಗಿ 1950 ಸಹಾಯವಾಣಿಯ ಮೂಲಕ ಚುನಾವಣೆಯ ನಿಮಿತ್ತದ ದೂರುಗಳನ್ನು ಸ್ವೀಕರಿಸಲಾಗುತ್ತದೆ.‌ ಅಲ್ಲದೇ ದೂರು ನೀಡಿದ 2 ಗಂಟೆಯಲ್ಲಿ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂಬ ಕಾನೂನು ರೂಪಿಸಲಾಗಿದೆ. ಸಿ-ವಿಜಿಲ್ ಎಂಬ ವಿನೂತನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಇಷ್ಟವಿಲ್ಲದ ವ್ಯಕ್ತಿಗೆ ಮತದಾನ ಮಾಡದ ಜನರನ್ನು ಧ್ವೇಷಿಸಲಾಗುತ್ತದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೋಟಾವನ್ನು ಆರಂಭಿಸಲಾಯಿತು. ಮತದಾನದಲ್ಲಿ ನೋಟಾಕ್ಕೆ ಹೆಚ್ಚು ಮತ‌ ಬಂದರೆ ಏನು ಎಂಬ ಬಗ್ಗೆ ಎಲ್ಲಿಯೂ ಕಾನೂನು ಇಲ್ಲ. ಈವರೆಗೂ ಅಭ್ಯರ್ಥಿಗಳಿಗಿಂತ ಹೆಚ್ಚುನೋಟಾ ಮತ ಬಂದಿಲ್ಲ.‌ ಹಾಗಾಗಿ ಇಲ್ಲಿಯವರೆಗೂ ಆ ಪರಿಸ್ಥಿತಿ ಬಂದಿಲ್ಲ. ನೋಟಾಗೆ ಹಾಕುವ ಬದಲು ಇರುವುದರಲ್ಲಿಯೇ ಉತ್ತಮ ಅಭ್ಯರ್ಥಿಗೆ ಮತ ನೀಡುವುದು ಒಳ್ಳೆಯದು ಎಂದು ಸಲಹೆನೀಡಿದರು.

ಚುನಾವಣಾ ಆಯೋಗ ಕೆಲವು ನಿಯಮಗಳನ್ನು ವಿಧಿಸಿದೆ. ಒಬ್ಬ ಅಭ್ಯರ್ಥಿ ₹ 70 ಲಕ್ಷದ ವರೆಗೆ ವೆಚ್ಚ ಮಾಡಬಹುದು. ಆದರೆ ರಾಜಕೀಯ ಪಕ್ಷಗಳಿಗೆ ಈ ನಿರ್ಬಂಧ ಇಲ್ಲ. ಆದರೆ ಎಲ್ಲದಕ್ಕೂ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳುವುದು ಅವಶ್ಯವಾಗಿದೆ. ಈ ರೀತಿಯ ಅನಧಿಕೃತವಾಗಿ ಹಣ ಸಂಗ್ರಹಿಸಿದ ದೂರು ಬಂದ ಹಿನ್ನೆಲೆಯಲ್ಲಿ ಸಿಂಧನೂರು, ಶಿರುಗುಪ್ಪದಲ್ಲಿನ ದಾಖಲೆ ರಹಿತ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿಯಿಂದ ಆರಂಭವಾದ ಮತದಾನ ಜಾಗೃತಿಯ ಬೈಕ್ ರಾಲಿ ಅಶೋಕ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದ ಮೂಲಕ ಜಿಲ್ಲಾಡಳಿತ ಭವನ ತಲುಪಿತು‌.

ತಾಲ್ಲೂಕು ಪಂಚಾಯಿತಿ ಸಿಒ ವೆಂಕೋಬಯ್ಯ ಮಾತನಾಡಿದರು.

ವಿದ್ಯಾರ್ಥಿನಿ ಸ್ಮಿತಾ ಪ್ರಾರ್ಥಿಸಿದರು. ಕೇಂದ್ರದ ವಿಶೇಷಾಧಿಕಾರಿ ಡಾ.ಮನೋಜ್ ಡೊಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗಿರೀಗೌಡರ್ ಅಳ್ಳಳ್ಳಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಕಾಶ ಅಳವಟ್ಟಿ ವಂದಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT