ಹನುಮಸಾಗರ: ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಎಲ್ಲ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ಹೇಳಿದರು.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯ ಸ್ವೀಪ್ ಸಮಿತಿಯ ನೇತೃತ್ವದಲ್ಲಿ ಸೋಮವಾರ ನಡೆದ ಕಾರ್ಯಕ್ರಮದ ಅಡಿಯಲ್ಲಿ ನೈತಿಕ ಮತದಾನ ಹೆಚ್ಚಿಸಲು ಮಾನವ ಸರಪಳಿಯನ್ನು ನಿರ್ಮಾಣ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಏ.23 ರಂದು ನಡೆಯುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾನ ಮಾಡಿ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ನಮ್ಮ ಕೊಡುಗೆಯನ್ನು ನೀಡಬೇಕು. ಯಾವುದೇ ರಾಜಕೀಯ ಪಕ್ಷಗಳು ನೀಡುವ ಆಸೆ ಆಮಿಷಕ್ಕೆ ಒಳಗಾಗದೇ ನಿರ್ಭಿತಿಯಿಂದ ಮತದಾನ ಮಾಡುವ ಜವಾಬ್ದಾರಿ ಎಲ್ಲರ ಮೇಲೆ ಇದೆ ಎಂದು ಹೇಳಿದರು.
ಸಹಾಯಕ ನಿರ್ದೇಶಕ ಅರುಣಕುಮಾರ ಮಾತನಾಡಿ, ನಮ್ಮ ಮತದಾನ ನಮ್ಮ ಹಕ್ಕಾಗಿದ್ದು, ಮತದಾನ ಮಾಡಿದವರೇ ನಿಜವಾದ ಪ್ರಜೆ. ಮತದಾನ ಮಾಡದಿರುವವರಿಗೆ ಯಾವುದೇ ಸೌಲಭ್ಯ ಕೇಳುವ ಹಕ್ಕಿಲ್ಲ. ಮತದಾನ ಮಾಡುವುದರೊಂದಿಗೆ ಕ್ಷೇತ್ರದ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ನಿಡಶೇಸಿ, ತಳುವಗೇರಾ, ಚಳಗೇರಾ, ಹೊಸಳ್ಳಿ, ಹನುಮಸಾಗರ, ಬಾದಿಮನಾಳ, ಜಹಗೀರಗುಡದೂರ, ಹನುಮನಾಳ, ಬಿಳೇಕಲ್, ನಿಲೋಗಲ್ ತುಗ್ಗಲಡೋಣಿ, ಗ್ರಾಮಗಳಲ್ಲಿ ಸಂಚರಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ ಇದ್ದರು.