ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಸಮೀಪದ ಚಿಕ್ಕರಾಂಪುರದಲ್ಲಿರುವ ಐತಿಹಾಸಿಕ ಅಂಜನಾದ್ರಿ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಶುಕ್ರವಾರ ಎಣಿಕೆ ಮಾಡಲಾಯಿತು.
ಹುಂಡಿಯಲ್ಲಿ ₹ 10.53 ಲಕ್ಷ ನಗದು ಸಂಗ್ರಹವಾಗಿದೆ. ಅಲ್ಲದೆ, ನೇಪಾಳ, ಬಾಂಗ್ಲಾದೇಶ ಸೇರಿದಂತೆ 16 ದೇಶಗಳ ವಿವಿಧ ನಾಣ್ಯಗಳು, ನೋಟುಗಳು ಸಂಗ್ರಹವಾಗಿದ್ದೂ ವಿಶೇಷ.
ಹುಂಡಿಯಲ್ಲಿ ಕೆಲವು ಪತ್ರಗಳು ದೊರೆತಿದ್ದು, ಇಷ್ಟಾರ್ಥ ನೆರವೇರಿಸುವಂತೆ ಭಕ್ತರು ದೇವರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ನೌಕರಿ, ಉದ್ಯೋಗ, ಮದುವೆ, ಮಕ್ಕಳು ಸೇರಿ ವಿವಿಧ ಕೋರಿಕೆ ಪತ್ರಗಳು ಇದ್ದವು.
ಹನುಮ ಮಾಲಾಧಾರಿ ವ್ರತಾಧಾರಿಗಳು ಸೇರಿ ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೂರ್ಯಾಸ್ತದ ದೃಶ್ಯ ವೀಕ್ಷಣೆಗೆ ಸಾಕಷ್ಟು ವಿದೇಶಿಗರು ಇಲ್ಲಿ ನೆರೆದಿರುತ್ತಾರೆ. ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬಂದ ನಂತರ ₹1.50 ಕೋಟಿ ಹಣ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ತಿಳಿಸಿದರು.
ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹಣ ಎಣಿಕೆ ಕಾರ್ಯ ನಡೆಯಿತು.ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇದ್ದರು.