ಅಳವಂಡಿ: ವಾಹನಗಳ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದ ಪೊಲೀಸರನ್ನು ಕಂಡು ದ್ವಿಚಕ್ರ ವಾಹನದ ಮೇಲೆ ಬಂದಿದ್ದ ವ್ಯಕ್ತಿಗಳು ಪರಾರಿಯಾದ ಘಟನೆ ನಡೆದಿದೆ.
ಅಳವಂಡಿ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ನಡೆದಿತ್ತು. ಈ ಸಂದರ್ಭದಲ್ಲಿ 3 ಬೈಕ್ನಲ್ಲಿ ಬಂದಿದ್ದ ಆರು ಜನರು ಪೊಲೀಸರು ಕಂಡ ತಕ್ಷಣ ಎರಡು ಬೈಕ್ನಲ್ಲಿದವರು ಮುಂಡರಗಿಯತ್ತ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ವಾಹನ ಬಿಟ್ಟು ಕಬ್ಬಿನ ಗದ್ದೆಯತ್ತ ಓಡಿ ಹೋಗಿದ್ದಾರೆ.
ಅನುಮಾನಗೊಂಡ ಪೊಲೀಸರು ಅಳವಂಡಿ ಸುತ್ತಮುತ್ತಲಿನ ಹೊಲಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಆದರೂ ಅವರು ಪತ್ತೆಯಾಗಲಿಲ್ಲ. ಬೈಕ್ ಪರಿಶೀಲಿಸಿದಾಗ ₹ 17 ಲಕ್ಷ ನಗದು ಹಾಗೂ ಮೊಬೈಲ್ ಪತ್ತೆಯಾಗಿದೆ. ಅದನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ. ಇದು ಕಳ್ಳರ ತಂಡ ಇರಬಹುದು ಎಂಬ ಶಂಕೆಯಿಂದ ಪೊಲೀಸರು ಶ್ವಾನದಳ ಸಮೇತ ಕಾರ್ಯಚರಣೆ ನಡೆಸಿದ್ದಾರೆ.
ಎಸ್ಪಿ ಟಿ.ಶ್ರೀಧರ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಅವರ ಪತ್ತೆಗಾಗಿ ತೀವ್ರ ಕಾರ್ಯಚರಣೆ ನಡೆಸಿದರು. ಅಳವಂಡಿ-ಕಂಪ್ಲಿ ಭಾಗದ ಹೊಲ ಗದ್ದೆಗಳಲ್ಲಿ ಎಸ್ಪಿ ಶ್ರೀಧರ್, ಡಿವೈಎಸ್ಪಿ ಗೀತಾ ನೇತೃತ್ವದ ಸುಮಾರು ನಾಲ್ಕು ತಂಡಗಳು 150ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಕಾರ್ಯಚರಣೆ ನಡೆಸಿವೆ.
ದರೋಡೆ ಮಾಡಿಕೊಂಡು ಬಂದಿರುವ ಹಣ ಇದಾಗಿರಬಹುದು. ತಪ್ಪಿಸಿಕೊಂಡವರ ಗುರುತು ಪತ್ತೆಯಾಗಿದೆ. ಗದ್ದೆಯ ಬಳಿ ಓಡಿ ಹೋದವರು ಮೈನಳ್ಳಿಯ ಹಳ್ಳ ದಾಟಿಕೊಂಡು ಹೋಗಿರಬಹುದು . ಶೀಘ್ರವೇ ಅವರನ್ನು ಪತ್ತೆಹಚ್ಚಲಾಗುವುದು ಎಂದು ಎಸ್ಪಿ ಟಿ.ಶ್ರೀಧರ ಹೇಳಿದ್ದಾರೆ.