ಕೊಪ್ಪಳ:ನಗರದ ಪಾಲಿಕ್ಲಿನಿಕ್ನ ಪಶು ವೈದ್ಯಾಧಿಕಾರಿಗಳ ತಂಡದವರು, ಬೀರಪ್ಪ ರೇವಳಿ ಎಂಬುವರಿಗೆ ಸೇರಿದ ಆಕಳು ಹೊಟ್ಟೆಯಿಂದ 25 ಕೆ.ಜಿ.ಗಳಷ್ಟು ಪ್ಲಾಸ್ಟಿಕ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಆಕಳು 15 ದಿನಗಳಿಂದ ಆಹಾರ ಸೇವಿಸದೆ, ಹಾಲನ್ನೂ ಕೊಡದೆ ನಿತ್ರಾಣಗೊಂಡಿತ್ತು. ಪರೀಕ್ಷಿಸಿದ ಪಶುವೈದ್ಯರು ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇರಬಹುದು ಎಂದು ಅಂದಾಜಿಸಿ ತಪಾಸಣೆ ನಡೆಸಿದ್ದರು.
ಪಾಲಿಕ್ಲಿನಿಕ್ನ ಉಪನಿರ್ದೇಶಕ ಡಾ.ಅಶೋಕ ಗೊಣಸಗಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಚಂದ್ರಶೇಖರ ಜಿ., ಡಾ.ಯಮನಪ್ಪರ ಅವರನ್ನು ಒಳಗೊಂಡ ತಂಡವು ಆಕಳಿನ ಉದರ ಶಸ್ತ್ರಚಿಕಿತ್ಸೆ ನಡೆಸಿ 25 ಕೆ.ಜಿ ಪ್ಲಾಸ್ಟಿಕ್ ಹೊರತೆಗೆದಿದೆ.
‘ಸಾರ್ವಜನಿಕರು ಪ್ಲಾಸ್ಟಿಕ್ ಉಪಯೋಗ ಮಿತಗೊಳಿಸುವುದರ ಜೊತೆಗೆ ಸೂಕ್ತ ವಿಲೇವಾರಿ ಮಾಡಬೇಕು. ಪರಿಸರ ಮತ್ತು ಪ್ರಾಣಿಗಳ ಜೀವಕ್ಕೂ ಪ್ಲಾಸ್ಟಿಕ್ ಅಪಾಯಕಾರಿಯಾಗಿದೆ. ಈ ಕುರಿತು ಜನರೇ ಸ್ವಯಂ ಜಾಗೃತಿ ವಹಿಸಬೇಕು’ ಎಂದು ಡಾ.ಅಶೋಕ ಗೊಣಸಗಿ ಹೇಳಿದರು.