ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಜಿಲ್ಲಾ ಅಥ್ಲೆಟಿಕ್ಸ್ ಅಸೋಷಿಯೇಷನ್ ಮತ್ತು ಗವಿಮಠದ ಆಶ್ರಯದಲ್ಲಿ ಮಂಗಳವಾರನಗರದ ಗವಿಮಠದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗವಿಸಿದ್ಧೇಶ್ವರ ಕಾಲೇಜಿನ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಬುಧವಾರ ಆರಂಭವಾದ ಪಂದ್ಯಾವಳಿಯಲ್ಲಿ 16 ಪಂದ್ಯಗಳು ಮುಕ್ತಾಯವಾದವು. ಫಿನಾಲೆ ಹಂತಕ್ಕೆ ಆಯ್ಕೆಗೆ ಗುರುವಾರ ಮಧ್ಯಾಹ್ನದ ವರೆಗೆ ಪಂದ್ಯಾವಳಿ ನಡೆದವು. ಸಂಜೆ ವೇಳೆಗೆ ಕ್ವಾಟರ್ ಪೈನಲ್, ಸೆಮಿಪೈನಲ್ ಮತ್ತು ಫೈನಲ್ ಪಂದ್ಯಾವಳಿಗಳು ನಡೆದವು.
ಹುನಗುಂದ ತಂಡಕ್ಕೆ ದ್ವೀತಿಯ ಬಹುಮಾನ, ಚಳಗೇರಾ ತಂಡಕ್ಕೆ ತೃತೀಯ ಬಹುಮಾನ ಮತ್ತು ಹಾರಾಳ ತಂಡಕ್ಕೆ ನಾಲ್ಕನೇ ಬಹುಮಾನ ಲಭಿಸಿದೆ.
ವಿಜೇತ ತಂಡಗಳಿಗೆ ಟ್ರೋಫಿ ಸಮೇತ ಪ್ರಥಮ ಸ್ಥಾನ ₹ 25 ಸಾವಿರ ನಗದು, ₹ 15 ಸಾವಿರ ನಗದು, ₹ 10 ಸಾವಿರ ನಗದು, ನಾಲ್ಕನೇ ಸ್ಥಾನಕ್ಕೆ ₹ 5 ಸಾವಿರ ನಗದು ಬಹುಮಾನ ನೀಡಿ, ಗೌರವಿಸಲಾಗುತ್ತದೆ.
ಆಟಕ್ಕೆ ಅಡ್ಡಿಯಾಗದ ಅಂಗವಿಕಲತೆ:
ತೃತೀಯ ಬಹುಮಾನ ಪಡೆದ ಚಳಗೇರಾ ತಂಡದಲ್ಲಿನ ಅಂಗವಿಕಲ ಯುವಕ ಬಸವರಾಜ್ ಚಿಕ್ಕವಂಕಲಕುಂಟಾ ಅವರ ಆಟದ ಶೈಲಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಗೆ ಒಂದು ಕೈ ಇರಲಿಲ್ಲ. ಬಸವರಾಜ್ ರೈಡ್ ಮಾಡುತ್ತಿದ್ದಂತೆಯೇ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಒಡೆದು ಪ್ರೋತ್ಸಾಹಿಸಿದರು. ಅವರು ಯಾವುದೇ ಹಿಂಜರಿಕೆ ಇಲ್ಲದೇ ಉತ್ತಮ ಪ್ರದರ್ಶನ ನೀಡಿದರು.
ಸೋಂಪುರ ಮತ್ತು ಗವಿಸಿದ್ಧೇಶ್ವರ ಕಾಲೇಜಿನ ತಂಡಗಳ ವಿರುದ್ಧದ ಪಂದ್ಯಕ್ಕೆ ಟಾಸ್ ಮಾಡುವ ಮೂಲಕ ಸಂಸದ ಸಂಗಣ್ಣ ಕರಡಿ ಪಂದ್ಯಾವಳಿಗೆ ಚಾಲನೆ ನೀಡಿ, ‘ಗ್ರಾಮೀಣ ಕ್ರೀಡೆಗಳು ಅವನತಿಯತ್ತ ಸರಿಯುತ್ತಿವೆ. ಅವುಗಳನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ‘ ಎಂದರು.
ಕ್ರೀಡೆಯಲ್ಲಿ ಸೋಲು–ಗೆಲುವು ಸಾಮಾನ್ಯ. ಅದರಂತೆ ಜೀವನದಲ್ಲಿಯೂ ಕಷ್ಟ–ಸುಖಗಳು ಬರುತ್ತವೆ. ಅವುಗಳನ್ನು ಸಹಜವಾಗಿ ತೆಗೆದುಕೊಳ್ಳಬೇಕು ಎನ್ನುವ ಸ್ಪರ್ಧಾತ್ಮಕ ಮನೋಭಾವವನ್ನು ಕ್ರೀಡೆ ನೀಡುತ್ತದೆ ಎಂದರು.
ಹಾಲೇಶ್ ಕಂದಾರಿ, ಗವಿ ಜಂತಕಲ್, ಈಶಪ್ಪ ದೊಡ್ಡಮನಿ ಇದ್ದರು.