ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಇತಿಹಾಸ ಸಾರುವ ಆನೆಗೊಂದಿ ಹಾಗೂ ಕನಕಗಿರಿ ಉತ್ಸವ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಯು.ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಸಂಘಟನೆ ಜಿಲ್ಲಾಧ್ಯಕ್ಷ ಪಂಪಣ್ಣ ಮಾತನಾಡಿ, ಆನೆಗೊಂದಿ ಸುತ್ತಮುತ್ತ ವಿಜಯನಗರ ಕಾಲದ ದೇವಸ್ಥಾನ, ಮಂಟಪ ಸೇರಿ ಇತಿಹಾಸ ತಿಳಿಸುವ ಅನೇಕ ಕುರುಹುಗಳಿದ್ದು, ಇಲ್ಲಿನ ಇತಿಹಾಸ, ಸಂಸ್ಕೃತಿ ಉಳಿಸುವ ಉದ್ದೇಶದಿಂದ ಆನೆಗೊಂದಿ ಹಾಗೂ ಕನಕಗಿರಿ ಉತ್ಸವ ನಡೆಸಲಾಗುತ್ತಿದೆ.
ಕಳೆದ 2 ವರ್ಷಗಳಿಂದ ಕೋವಿಡ್ ಭೀತಿ ಹಿನ್ನಲೆಯಲ್ಲಿ ಸರ್ಕಾರ ಉತ್ಸವ ಕೈಬಿಟ್ಟಿದ್ದು, ಕೊನೆಯ ಬಾರಿ ಆನೆಗೊಂದಿ ಉತ್ಸವ 2019-20ನೇ ಸಾಲಿನಲ್ಲಿ ನಡೆದಿತ್ತು. ಇದೀಗ ಸರ್ಕಾರ ಎಲ್ಲ ಬೃಹತ್ ಕಾರ್ಯಕ್ರಮಗಳು ನಡೆಸುತ್ತಿದ್ದು, ಉತ್ಸವಕ್ಕೆ ಮಾತ್ರ ಆಸಕ್ತಿ ತೋರುತ್ತಿಲ್ಲ ಎಂದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಮ್ಮ ವಿಜಯನಗರ ಜಿಲ್ಲೆಯ ಹಂಪಿ ಉತ್ಸವ ಸಂಭ್ರಮದಿಂದ ನಡೆಸಲು ಸಿದ್ಧತೆ ನಡೆಸಿ, ಆನೆಗೊಂದಿ, ಕನಕಗಿರಿ ಉತ್ಸವದ ವಿಚಾರದಲ್ಲಿ ತಾರತಮ್ಯ ನೀತಿ ತೋರುತ್ತಿದ್ದಾರೆ ಎಂದು ದೂರಿದರು.
ಗಂಗಾವತಿ ಶಾಸಕರು ಆನೆಗೊಂದಿ ಉತ್ಸವಕ್ಕೆ ₹ 10 ಕೋಟಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ ಹೊರೆತು, ಆಚರಿಸಲೆಬೇಕು ಎಂಬ ದೃಢ ನಿರ್ಧಾರ ತೋರುತ್ತಿಲ್ಲ. ಕೂಡಲೇ ಜಿಲ್ಲಾಡಳಿತ, ಶಾಸಕರು ಆನೆಗೊಂದಿ ಉತ್ಸವ ನಡೆಸಲು ಮುಂದಾಗಬೇಕು ಎಂದು ಆಗ್ರಹಿಸಿದರು.