ಹನುಮಸಾಗರ: ‘ಸಮಾಜದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದ ಹಾಲಕೆರೆಯ ಡಾ.ಅಭಿನವ ಅನ್ನದಾನ ಶ್ರೀಗಳು ಲಿಂಗೈಕ್ಯರಾದ್ದರಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ’ ಎಂದು ಅನ್ನದಾನೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಗಯ್ಯ ವಸ್ತ್ರದ ಹೇಳಿದರು.
ಇಲ್ಲಿನ ಅನ್ನದಾನೇಶ್ವರ ಮಠದಲ್ಲಿ ಸೋಮವಾರ ಲಿಂಗೈಕ್ಯರಾದ ಹಾಲಕೆರೆಯ ಡಾ.ಅನ್ನದಾನ ಸ್ವಾಮಿಗಳಿಗೆ ಸಮಾಜದಿಂದ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಅನ್ನದಾನ, ವಿದ್ಯಾದಾನ ಸೇರಿ ಹಾಲಕೆರೆ ಮಠ ಹಾಗೂ 27 ಶಾಖಾ ಮಠಗಳೂ ಈ ಭಾಗದ ಸರ್ವ ಜನಾಂಗದ ಶ್ರದ್ಧಾ ಕೇಂದ್ರಗಳಾಗುವಂತೆ ಮಾಡುವಲ್ಲಿ ಶ್ರೀಗಳ ಸಾಧನೆ ಮರೆಯುವಂತಿಲ್ಲ ಎಂದು ಹೇಳಿದರು.
ಮುಖಂಡ ಬಸವರಾಜ ಹಳ್ಳೂರ ಮಾತನಾಡಿ,‘ಸುಮಾರು ಐದುನೂರು ವರ್ಷಗಳ ಭವ್ಯ ಆಧ್ಯಾತ್ಮಿಕ ಪರಂಪರೆ ಹೊಂದಿದ ಶ್ರೀಮಠಕ್ಕೆ ಮತ್ತಷ್ಟು ಮೆರಗು ನೀಡಿದವರೂ ಡಾ.ಅಭಿನವ ಅನ್ನದಾನ ಶ್ರೀಗಳು, ಸರ್ವರಲ್ಲಿ ಆಧ್ಯಾತ್ಮದ ಕೀರ್ತಿಯನ್ನು ಬೆಳಗಿಸಿ ಶಾಖಾ ಮಠಗಳಲ್ಲಿನ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದರು’ ಎಂದರು.
ಮುಖಂಡ ಮಹಾಂತೇಶ ಅಗಸಿಮುಂದಿನ ಮಾತನಾಡಿ,‘ಶ್ರೀಗಳು ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣದಾತರಾಗಿದ್ದು, ವಿವಿಧ ಭಾಗಗಳಲ್ಲಿ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದರು.
ಮಲ್ಲಯ್ಯ ಕೋಮಾರಿ ಮಾತನಾಡಿ,‘ಸಾಮೂಹಿಕ ವಿವಾಹ, ಶಿವಯೋಗಮಂದಿರದ ಶತಮಾನೋತ್ಸವ, 5001 ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ, ಚಕ್ಕಡಿಗಳೊಂದಿಗೆ ಉಳವಿಯವರೆಗೆ ಪಾದಯಾತ್ರೆ, 5001 ಕೃಷಿ ಕಾರ್ಮಿಕ ಮಹಿಳೆಯರಿಗೆ ಸನ್ಮಾನ, ಜೈವಿಕ ಇಂಧನ ತಜ್ಞರ ಸಮಾವೇಶ, ಸಾವಯವ ಕೃಷಿಕರ ಸಮಾವೇಶ ಹೀಗೆ ಹತ್ತಾರು ಸಾಧನೆಗಳ ಮೂಲಕ ನಾಡಿಗೆ ಬೆಳಕಾದವರು’ ಎಂದರು.
ಲಿಂಗೈಕ್ಯರಾದ ಡಾ.ಅನ್ನದಾನ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮೌನಾಚರಣೆ ಮಾಡಲಾಯಿತು.
ಸಂಜೆಯಿಂದ ಬೆಳಗಿನವರೆಗೆ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಮುಖರಾದ ಕರಿಸಿದ್ದಪ್ಪ ಕುಷ್ಟಗಿ, ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಹೂಲ್ಲೂರು, ಬಸವರಾಜ ಚಿನಿವಾಲರ, ಶ್ರೀಶೈಲ್ ಮೋಟಗಿ, ಚಂದಪ್ಪ ಅಗಸಿಮುಂದಿನ, ರಾಚಪ್ಪ ಚಿನಿವಾಲರ, ಸೂಗಯ್ಯ ಅಮಲಿಕೊಪ್ಪಮಠ, ಪಿಡಿಒ ನಿಂಗಪ್ಪ ಮೂಲಿಮನಿ, ವಿಶ್ವನಾಥ ಕನ್ನೂರ, ರುದ್ರಗೌಡ ಗೌಡಪ್ಪನವರ, ಬಸವಂತಪ್ಪ ಕಂಪ್ಲಿ, ಬಸವರಾಜ ಬಾಚಲಾಪುರ, ಬಸವರಾಜ ದ್ಯಾವಣ್ಣವರ, ಪ್ರಶಾಂತ ಗಡಾದ, ಸೂಚಪ್ಪ ದೇವರಮನಿ, ಮಹಾಂತಯ್ಯ ಕೋಮಾರಿ, ಸಂಗಮೇಶ ಬ್ಯಾಳಿ, ಅಂದಾನಯ್ಯ ಸೊಪ್ಪಿಮಠ, ಸಿದ್ದಯ್ಯ ಬಾಳೆಹಳ್ಳಿಮಠ, ದುರುಗೇಶ ಮಡಿವಾಳರ, ಬಸವರಾಜ ದಟ್ಟಿ, ಸಿದ್ದಣ್ಣ ಚಿನಿವಾಲರ, ನಿಂಗಪ್ಪ ಮೋಟಗಿ, ಪ್ರಭು ಬ್ಯಾಳಿ, ಶರಣಪ್ಪ ಪಲ್ಲೇದ, ಉಮೇಶ ಬಾಚಲಾಪೂರ, ಬಸವರಾಜ ಹಡಪದ, ರಾಜೇಸಾಬ ಕುಷ್ಟಗಿ ಹಾಗೂ ರಿಯಾಜ್ ಖಾಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.