ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ವಿವಿಧ ಸಂಘಟನೆ ನೇತೃತ್ವದಲ್ಲಿ ಆಶಾ ಕಾರ್ಯಕರ್ತರ ಪ್ರತಿಭಟನೆ
Last Updated 21 ಜೂನ್ 2019, 12:44 IST
ಅಕ್ಷರ ಗಾತ್ರ

ಕೊಪ್ಪಳ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕ ಹಾಗೂ ಆಲ್‌ ಇಂಡಿಯಾ ಯೂನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ)ಯ ನೇತೃತ್ವದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಪ್ರೋತ್ಸಾಹಧನವನ್ನು ಒಟ್ಟಿಗೆ ಸೇರಿಸಿ, ಕನಿಷ್ಟ ಮಾಸಿಕ ಗೌರವಧನ ₹ 12 ಸಾವಿರಕ್ಕೆ ನಿಗದಿ ಮಾಡಬೇಕು. ಆಶಾ ಸಾಫ್ಟ್ ಅಥವಾ ಆರ್‌ಸಿಎಚ್ ಪೋರ್ಟಲ್‍ಗೆ ಪ್ರೋತ್ಸಾಹಧನ ಜೋಡಣೆ ರದ್ದುಪಡಿಸಬೇಕು. ಕಳೆದ 9 ತಿಂಗಳಿಂದ ಬಾಕಿ ಇರುವ ಎಂಸಿಟಿಎಸ್‌ ಸೇವೆಗಳ ಪ್ರೋತ್ಸಾಹಧನವನ್ನು ಪ್ರತಿ ಕಾರ್ಯಕರ್ತೆಯರಿಗೆ 1,000 ಜನಸಂಖ್ಯೆಗೆ ಕಾರ್ಯನಿರ್ವಹಿಸುವ ಪ್ರತಿ ಆಶಾಗೆ ಮಾಸಿಕ ₹ 3 ಸಾವಿರ ನೀಡಬೇಕು. ಇದನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಅಥವಾ 9 ತಿಂಗಳಲ್ಲಿ ಮಾಡಿದ ಮ್ಯಾನುವಲ್ ವರದಿ ಸಂಗ್ರಹಿಸಿ ಪ್ರೋತ್ಸಾಹಧನವನ್ನು ಪಾವತಿ ಮಾಡಬೇಕು. ಒಂದೇ ಬಾರಿಗೆ ಬಾಕಿ ಪ್ರೋತ್ಸಾಹಧನವನ್ನು ನೀಡಬೇಕು ಎಂದು ಆಗ್ರಹಿಸಿದರು.

ಈ ಹಿಂದಿನ ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ಮತ್ತು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ, ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ, ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಕಾರ್ಪಸ್ ಫಂಡ್ ಮೀಸಲಿಟ್ಟು ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಪಿಂಚಣಿ ನೀಡಬೇಕು. ಅಲ್ಲದೇ ನಿವೃತ್ತಿ ಪರಿಹಾರ(ಇಡಿಗಂಟು)ನೀಡಬೇಕು. ಸಾಮಾಜಿಕ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ತಂದ ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ಸಂಪೂರ್ಣ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು. ಹೆರಿಗೆ ರಜೆ ನೀಡಿ, ರಜೆಯಲ್ಲಿ ಮಾಸಿಕ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.

ತಿಂಗಳಿಗೆ 2 ಬಾರಿ ಲಾರ್ವಾ ಸರ್ವೆ ಮತ್ತು ವಿವಿಧ ಸರ್ವೆಗಳಿಗೆ ಹಲವು ವರ್ಷಗಳಿಂದ ಬಹುತೇಕ ಕಡೆಗಳಲ್ಲಿ ಪ್ರೋತ್ಸಾಹಧನ ನೀಡಿಲ್ಲ. ಪ್ರತಿ ದಿನದ ಸರ್ವೇ, ಜಾಥಾ ಅಥವಾ ಜಿಲ್ಲಾ ತಾಲ್ಲೂಕು ಕೇಂದ್ರದ ಸಭೆಗಳಿಗೆ ಕನಿಷ್ಠ ₹ 300 ನಿಗದಿಪಡಿಸಬೇಕು.ಕೇಂದ್ರ ಮಾರ್ಗಸೂಚಿಯಂತೆ ನಗರ ಆಶಾಗಳಿಗೆ 2000-2500 ಜನಸಂಖ್ಯೆಗೆ ಮಾತ್ರ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಸಂಘದೊಂದಿಗೆ ನಡೆದಿರುವ ಹಿಂದಿನ ಸಭೆಗಳ ನಿರ್ಣಯಗಳನ್ನು ಜಾರಿ ಮಾಡಬೇಕು. ಸರ್ಕಾರದ ಆದೇಶದಂತೆ ಪ್ರತಿ 3 ತಿಂಗಳಿಗೆ ಒಮ್ಮೆ ಆಶಾ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಜಿಲ್ಲಾ ಅಧ್ಯಕ್ಷ ಶರಣಬಸವ, ಜಿಲ್ಲಾ ಕಾರ್ಯದರ್ಶಿಕೌಶಲ್ಯ, ಆಶಾ ಕಾರ್ಯಕರ್ತೆಯರಾದ ನಂದವ್ವ, ಗಿರಿಜಾಬಾಯಿ, ಜಯಶ್ರೀ, ಖಾಜಾಬೀ, ರೇಣುಕಾ, ಸರಸ್ವತಿ, ವಿಜಯಲಕ್ಷ್ಮಿ, ಶುಭ, ಶಾರದಾ, ದೀಪಾ, ಶಿಲ್ಪಾ, ದೀಪಾ, ಮಲ್ಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT