ಕನಕಗಿರಿ: ಮುಸ್ಲಿಂ ಬಾಂಧವರು ಪಟ್ಟಣದ ಜಾಮಿಯಾ, ಇಬ್ರಾಯಿಂ ಹಾಗೂ ನೂರಾನಿ ಸೇರಿ ವಿವಿಧ ಮಸೀದಿಗಳಲ್ಲಿ ಕೊರೊನಾ ನಿಯಮ ಪಾಲಿಸುವ ಮೂಲಕ ಬುಧವಾರ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಜಾಮಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರು ಮೌಲಾನ್ ಮುಬಾರಕ್ ರಜಾ ಮಾತನಾಡಿ,‘ಮುಸ್ಲಿಂ ಸಮಾಜ ಬಾಂಧವರು ದಾನ, ಧರ್ಮ ಮಾಡುವ ಮೂಲಕ ಬಕ್ರೀದ್ ಹಬ್ಬ ಆಚರಣೆ ಮಾಡಬೇಕು’ ಎಂದು ತಿಳಿಸಿದರು.
ಬಡವರು, ನೊಂದವರು ಹಾಗೂ ದುರ್ಬಲ ವರ್ಗದವರ ಸಂಕಷ್ಟ, ನೋವುಗಳಲ್ಲಿ ಭಾಗಿಯಾಗುವ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ಅವರು ತಿಳಿಸಿದರು. ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ಮೆಹಬೂಬಸಾಬ ಗುರಿಕಾರ, ಎಪಿಎಂಸಿ ಮಾಜಿ ನಿರ್ದೇಶಕ ಇಮಾಮಸಾಬ ಎಲಿಗಾರ, ಸಮಿತಿ ಪದಾಧಿಕಾರಿಗಳಾದ ಶಾಮೀದಸಾಬ ಲೈನದಾರ, ಯಮನೂರಸಾಬ ಬಾಗಲಿ, ಗೂಡುಸಾಬ ಗುರಿಕಾರ, ಹೊನ್ನೂರುಸಾಬ ಕಳ್ಳಿ ಹಾಗೂ ಮೈಬೂಬಸಾಬ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಇದ್ದರು.