ಕೊಪ್ಪಳ: ‘ಅಭಿನಂದನಾ ಗ್ರಂಥಗಳ ಬಗ್ಗೆ ನನ್ನದೇ ಆದ ವಿಭಿನ್ನ ಕಲ್ಪನೆ ಇದೆ. ಅಭಿನಂದನೆ ಬದಲು ವಿಮರ್ಶೆ, ವಿಶ್ಲೇಷಣೆ ಮುಖ್ಯವೆಂದು ನಂಬಿದವನು ನಾನು. ಹೀಗಾಗಿ ನನ್ನ ಕುರಿತ ಯಾವುದೇ ಅಭಿನಂದನಾ ಗ್ರಂಥ ಪ್ರಕಟಣೆಗೆ ಅನುಮತಿ ನೀಡಿಲ್ಲ’ ಎಂದು ಬಂಡಾಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.
‘ಕೊಪ್ಪಳದ ಸಾಹಿತಿ ಹನುಮಂತಪ್ಪ ಅಂಡಗಿ ಅವರು ನನ್ನ ಮೇಲಿನ ಅಭಿಮಾನದಿಂದ ಅಭಿನಂದನಾ ಗ್ರಂಥ ಹೊರತರುವುದಾಗಿ ಪ್ರಕಟಣೆ ನೀಡಿದ್ದಾರೆ. ನನ್ನ ಜೀವನ ಮತ್ತು ಸಾಧನೆ ಕುರಿತು ಅಭಿನಂದನಾ ಗ್ರಂಥ ಪ್ರಕಟಣೆಗೆ ಮತ್ತು ಸಂಪಾದನೆಗೆ ರಾಜ್ಯದ ಯಾವುದೇ ಸಾಹಿತಿಗೆ ಅನುಮತಿ ನೀಡಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ನಮ್ಮ ಮೇಲೆ ಇರುವ ಅಭಿಮಾನ ಅರ್ಥವಾಗುತ್ತದೆ. ನನ್ನ ನಿಲುವನ್ನು ಸಾಹಿತ್ಯಾಸಕ್ತರು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.