ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದ ಮತ್ತು ಭಾರತೀಯ ಸಂಸ್ಕೃತಿ

ಸ್ವಾಧ್ಯಾಯ
ಅಕ್ಷರ ಗಾತ್ರ

ಕನ್ನಡದಲ್ಲಿ ವೇದಗಳ ಬಗ್ಗೆ ಬರಹ ಮಾಡಿದ ಪ್ರಮುಖರಲ್ಲಿ ಒಬ್ಬರು ಜಿ. ಎನ್‌. ಚಕ್ರವರ್ತಿ. ಅವರ ‘ಋಕ್ಸಂಹಿತಾಸಾರ’ ತುಂಬ ಗಮನಾರ್ಹ ಕೃತಿಗಳಲ್ಲಿ ಒಂದು. ಅಲ್ಲಿಯ ಕೆಲವು ಮಾತುಗಳು ಹೀಗಿವೆ:

‘ಜಗತ್ತಿನ ಇತಿಹಾಸಕ್ಕೆ ಸುಂದರವಾದ ಧ್ಯೇಯವುಳ್ಳ ಅರ್ಥವಿದೆಯೆಂದು ಭರತಖಂಡದ ಋಷಿಗಳ ದರ್ಶನ ಮತ್ತು ಸನಾತನ ಶ್ರದ್ಧೆ. ಋಷಿದೃಷ್ಟಿಗೆ ಜಗತ್ತೆಲ್ಲ ಕಾವ್ಯಾತ್ಮಕವಾಗಿಯೂ ಸುಂದರವಾಗಿಯೂ ಕಂಡಿತು. ವಿಶ್ವವ್ಯವಹಾರವೆಲ್ಲ ಚೈತನ್ಯ ಪ್ರೇರಿತ; ನಿಯಮಪಾಲಿತ. ಅಣುವಿನಿಂದ ಮಹತ್ತಿನವರೆಗೆ ಸಕಲ ಪ್ರಪಂಚವೂ ಈಶ್ವರತತ್ತ್ವದ ಅಂಶ... ಈಶ್ವರತತ್ತ್ವಕ್ಕಿಂತ ಜಗತ್ತು ಬೇರೆಯಲ್ಲ. ಮೂಲತತ್ತ್ವವೇ ಸಕಲ ಜಗದ್ವ್ಯಾವಹಾರಗಳ ಜೀವನಾಡಿಯಾದ್ದರಿಂದ ಸಕಲ ವೈಯಕ್ತಿಕ ವ್ಯವಹಾರವೂ ಅದರ ಸ್ವರೂಪ ಪ್ರಕಾಶನ. ಈ ಪ್ರಕಾಶವೆಲ್ಲ ಲಯಬದ್ಧ, ಸುಂದರ ಮತ್ತು ಆನಂದಾತ್ಮಕ. ವಿಶ್ವರಹಸ್ಯದರ್ಶನಕ್ಕೆ ಅಧಿಕಾರವುಳ್ಳ ಕವಿಸಹೃದಯಕ್ಕೆ ಆನಂದದಾಯಕ.

‘ಮಾನವನಿಗೂ ಬಾಹ್ಯ ಪ್ರಕೃತಿಗೂ ಇರುವುದು ಕೇವಲ ಭೌತಿಕ ಸಂಬಂಧ ಮಾತ್ರವೂ ಅಲ್ಲ. ದೇವ– ಮಾನವಾದಿಗಳ ಸಂಬಂಧ ಪರಸ್ಪರ ಪೋಷಕ... ಮಾನವನು ಈ ತತ್ತ್ವವನ್ನರಿತು ಜಗತ್ತಿನೊಡನೆ ಶಾಂತಿಯುತವಾದ ಮತ್ತು ಆನಂದಮಯವಾದ ಸಂಬಂಧವನ್ನು ಬೆಳೆಸಿ ವಿಶ್ವಶಾಂತಿಗೆ ಸಾಧಕನಾಗಿರಬೇಕೆಂಬುದೆ ವೈದಿಕ ಋಷಿಗಳ ಸಂದೇಶ. ಮಾನವನ ಜೀವನದ ಪ್ರತಿಯೊಂದು ಕ್ರಿಯೆಯೂ, ಸುತ್ತಮುತ್ತಲಿನ ಸನ್ನಿವೇಶದೊಡನಿರುವ ಸಂಬಂಧವೂ, ಸುಖದುಃಖಾತ್ಮಕಗಳಾದ ಅನುಭವ ಮತ್ತು ಪ್ರತಿಕ್ರಿಯೆಗಳೂ ಜಗತ್‌ ಸ್ಪಂದನದ ಅಂಶ ಮಾತ್ರ. ಆದ್ದರಿಂದ, ಈಶ್ವರ ಸಂಕಲ್ಪದ ಫಲವಾದ ಮತ್ತು ಈಶ್ವರ ಸ್ವರೂಪ ಪ್ರಕಾಶಕವಾದ ಜಗತ್‌ ಸ್ಪಂದನದಲ್ಲಿ ತಾನೂ ಭಾಗವಹಿಸುತ್ತೇನೆಂಬ ಅರಿವುಂಟಾದಾಗ ಮಾನವನ ಜೀವನದ ಕ್ರಮವೇ ಬೇರೆ.

‘ಭರತಖಂಡದ ರಾಷ್ಟ್ರಧ್ವಜದಲ್ಲಿ ರಾರಾಜಿಸುತ್ತ ಅಧ್ಯಾತ್ಮತತ್ತ್ವ ಪ್ರತಿಪಾದಕವೂ ವಿಶ್ವಸಾಮರಸ್ಯದ್ಯೋತಕವೂ ಮತ್ತು ನೈತಿಕಮಾರ್ಗ ಪ್ರದರ್ಶಕವೂ ಆಗಿರುವ ಧರ್ಮಚಕ್ರ ವಿಶ್ವಸಾಮರಸ್ಯವನ್ನು ಸಾಕ್ಷಾತ್ಕರಿಸಿದ ವೈದಿಕ ಋಷಿಗಳ ದಿವ್ಯಸಂದೇಶದ ಪ್ರತೀಕ. ವೈಯಕ್ತಿಕ, ಸಾಮಾಜಿಕ, ರಾಜಕೀಯ ಜೀವನಗಳ ಪ್ರತಿಯೊಂದು ಘಟ್ಟದಲ್ಲೂ ದಿವ್ಯತ್ವವನ್ನೂ ದಿವ್ಯಧ್ಯೇಯವನ್ನೂ ತೋರಿಸುತ್ತ ವಿಶ್ವಪ್ರೇಮದ ಬೆಳವಣಿಗೆಗೆ ಪ್ರೇರಕವಾಗಿ ಸಾವಿರಾರು ವರ್ಷಗಳಿಂದ ಅನುಸೂತ್ಯವಾಗಿ ಮುಂದುವರಿಯುತ್ತಿರುವ ಸನಾತನಧರ್ಮದ ದಿವ್ಯಸಂಕೇತ. ವೈದಿಕ ಮಹರ್ಷಿಗಳ ಸಂದೇಶದಲ್ಲಿ ಶ್ರದ್ಧೆಯುಳ್ಳ ರಾಷ್ಟ್ರನಾಯಕರು ಮಾನವನ ವಿವೇಕಯುತವಾದ ಜೀವನಕ್ಕೆ ಸ್ಫೂರ್ತಿ ನೀಡುತ್ತ ಜಗತ್ತಿಗೆ ಮಾರ್ಗದರ್ಶಕವಾಗಿರಲೆಂದು ಧರ್ಮಚಕ್ರವನ್ನು ರಾಷ್ಟ್ರಧ್ವಜದಲ್ಲಿ ಅಳವಡಿಸಿ ಅಂತರಿಕ್ಷದಲ್ಲಿ ಎತ್ತಿಹಿಡಿದಿದ್ದಾರೆ. ಇದೇ ಸತ್ಯಮಾರ್ಗ. ಇದರಿಂದಲೇ ಸಕಲ ಜಯ – ಎಂದು ಘೋಷಿಸುವ ಸತ್ಯಮೇವ ಜಯತೇ ಎಂಬ ಮಹಾಸಂದೇಶವನ್ನೂ ಜೊತೆಯಲ್ಲಿ ಸಾರಿದ್ದಾರೆ.’

ವೇದವಾಙ್ಮಯವನ್ನು ಯಾವ ದಿಕ್ಕಿನಿಂದ ಅಧ್ಯಯನ ಮಾಡಿದರೆ ಪ್ರಯೋಜನವುಂಟು – ಎಂಬುದನ್ನು ಈ ಮಾತುಗಳು ಸೂಚಿಸುತ್ತಿವೆ.

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT