ತಾವರಗೇರಾ: ಪಟ್ಟಣದಿಂದ ಗಂಗಾವತಿಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಿಂದ ನಿರ್ಮಿಸಿರುವ ಉದ್ಯಾನವು ಹಚ್ಚಹಸಿರಿನಿಂದ ಕೂಡಿದ್ದು, ಆಕರ್ಷಕವಾಗಿದೆ.
ಅಧಿಕಾರಿಗಳ ಮತ್ತು ಸ್ಥಳಿಯ ರಾಜಕಾರಣಿಗಳ ಆಸಕ್ತಿಯಿಂದ ₹ 42 ಲಕ್ಷ ವೆಚ್ಚದಲ್ಲಿ ಈ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ. ನಿತ್ಯ ಸಾಕಷ್ಟು ಜನರು ಇಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಆದರೆ, ಕೊರೊನಾ ಹಿನ್ನೆಯಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ತುಸು ಕಡಿಮೆಯಾಗಿದೆ.
ಈ ಉದ್ಯಾನದಲ್ಲಿ ವಿವಿಧ ತರಹದ ಹೂವಿನ ಗಿಡಗಳು, ಬಳ್ಳಿಗಳು ದೊಡ್ಡ ಸಂಗ್ರಹವೇ ಇದೆ.
ವಾಯುವಿಹಾರಕ್ಕೆಅಗತ್ಯ ರಸ್ತೆಯನ್ನೂ ನಿರ್ಮಿಸಲಾಗಿದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆ ಸಹ ಮಾಡಲಾಗಿದೆ. ಸುತ್ತಲಿನ ಪ್ರದೇಶಕ್ಕೆ ತಂತಿ ಬೇಲಿ ಹಾಕಲಾಗಿದೆ.
ಇಲ್ಲಿಗೆ ಬರುವ ಜನರಿಗೆ ನೆಮ್ಮದಿ ಸಿಗುವಂತಹ ವಾತಾವರಣವಿದೆ. ಪ್ರತಿದಿನ ಸಂಜೆ ಮತ್ತು ಬೆಳಿಗ್ಗೆ ಮಹಿಳೆಯರು , ಮಕ್ಕಳು ಕೋವಿಡ್ ನಿಯಮ ಪಾಲನೆಯೊಂದಿಗೆ ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಾರೆ.
ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಉದ್ಯಾನದಲ್ಲಿ ಬೋರವೆಲ್ ವ್ಯವಸ್ಥೆ ಮಾಡಲಾಗಿದೆ. ಪೋಷಣೆಗಾಗಿ ಕಾವಲುಗಾರರನ್ನೂ ಸಹ ನೇಮಕ ಮಾಡಲಾಗಿದೆ.
ಪಟ್ಟಣದ ಗಂಗಾವತಿ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಉದ್ಯಾನ ಹಚ್ಚ ಹಸಿರಿನಿಂದ ಕೂಡಿದ್ದು, ಜನರಿಗೆ ವಿಶ್ರಾಂತಿ ನೀಡುವ ತಾಣವಾಗಿದೆ ಎಂದು ಸ್ಥಳೀಯ ನಿವಾಸಿ ಮಂಜು ಹೂಗಾರ ಹೇಳುತ್ತಾರೆ.