ಕೊಪ್ಪಳ: ‘ಸಾಮಾಜಿಕ ಬದಲಾವಣೆ ಗಳಿಗಾಗಿ ಶರಣರುಮಾಡಿದ ಕಾರ್ಯ ಮಹತ್ವದ್ದು, ಬುದ್ಧನ ಶಾಂತಿ, ಅಹಿಂಸೆ ತತ್ವಗಳು ಹಾಗೂ ಬಸವಣ್ಣನವರ ಸಾಮಾಜಿಕ ಸಮಾನತೆ ತತ್ವಗಳು ಸಮಾಜದ ಆರೋಗ್ಯಕ್ಕೆ ಅತ್ಯಗತ್ಯವಾಗಿವೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾತಿ, ಮತ, ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಶರಣ ಧರ್ಮಕ್ಕಿದೆ. ಶರಣ ಸಾಹಿತ್ಯ ಪರಿಷತ್ತು ತಿಂಗಳು, ತ್ರೈಮಾಸಿಕ ಅಥವಾ ನಿಯಮಿತವಾಗಿ ವಿಚಾರ ಉಪನ್ಯಾಸ ಏರ್ಪಡಿಸಿ ಅದನ್ನು ಕಿರುಪುಸ್ತಕಗಳ ರೂಪದಲ್ಲಿ ಪ್ರಕಟಿಸುವ ಕಾರ್ಯಗಳನ್ನು ಕೈಗೊಳ್ಳಲಿ ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಲೇಖಕರು, ಪ್ರಕಾಶಕರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಪುಸ್ತಕಗಳ ಸಗಟು ಖರೀದಿ ಮಾಡುತ್ತಿದೆ. ಕೊಪ್ಪಳದ ಗಣೇಶ ನಗರದಲ್ಲಿ ಗ್ರಂಥಾಲಯ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯರು ನಿರಂತರವಾಗಿ ಭೇಟಿ ನೀಡಬೇಕು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷೆಸಾವಿತ್ರಿ ಮುಜುಮದಾರ ಮಾತನಾಡಿ,‘ಬದುಕು ಸ್ಥಾವರದಿಂದ ಜಂಗಮದೆಡೆಗೆ, ಅಳಿವಿನಿಂದ ಉಳಿವೆನೆಡೆಗೆ ಸಾಗಬೇಕು. ವರ್ತಮಾನದಲ್ಲಿಯ ಸಾಮರಸ್ಯ ಕೊರತೆ, ಅನಾರೋಗ್ಯಕ್ಕೆ ಶರಣ ಪಥದಲ್ಲಿ ಮಾತ್ರ ಉತ್ತರಗಳಿವೆ’ ಎಂದರು.
ಶ್ರೀನಿವಾಸ ಚಿತ್ರಗಾರ ಅವರ ‘ನೂರೊಂದು ಆಯ್ದ ಕವನಗಳು’ ಕೃತಿ ಬಿಡುಗಡೆ ಮಾಡಲಾಯಿತು.
ವಿಧಾನ ಪರಿಷತ್ತಿನ ನೂತನ ಸದಸ್ಯೆ ಹೇಮಲತಾ ನಾಯಕ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ,‘ಪುಸ್ತಕ ಬಾಂಧವ್ಯ ಹೊಂದಿರುವ ವ್ಯಕ್ತಿಯ ವ್ಯಕ್ತಿತ್ವ ಸದಾ ವಿಕಸನಗೊಳ್ಳುತ್ತ ಸಾಗುತ್ತದೆ. ಜಾಲತಾಣಗಳಲ್ಲಿ ಮಾಹಿತಿ ಸಿಗಬಹುದು. ಆದರೆ ಪುಸ್ತಕಗಳ ಅಧ್ಯಯನವು ಜ್ಞಾನಕ್ಕೆ ಅಧಿಕೃತತೆ ಒದಗಿಸುತ್ತದೆ’ ಎಂದರು.
ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷಜಿ.ಎಸ್.ಗೋನಾಳ ಹಾಗೂ ಸಾಹಿತಿ ಡಾ.ಅಂಜನಾ ಕೃಷ್ಣಪ್ಪ ಮಾತನಾಡಿದರು.
ಬಳ್ಳಾರಿ ವಿವಿ ಸಿಂಡಿಕೇಟ್ ಸದಸ್ಯ ಡಾ.ಬಸವರಾಜ ಪೂಜಾರ, ಮಹೇಶ ಸುರ್ವೆ, ಮಂಜುನಾಥ ಡೊಳ್ಳಿನ, ಉಮೇಶಬಾಬು ಸುರ್ವೆ ಹಾಗೂ ಬಾಳಪ್ಪ ವೀರಾಪುರ ಇದ್ದರು.
ಸೋಮನಗೌಡ ವಗರನಾಳ ಸ್ವಾಗತಿಸಿದರು. ನಿಂಗಮ್ಮ ಪಟ್ಟಣಶೆಟ್ಟಿ ನಿರೂಪಿಸಿದರು. ನಾಗರಾಜ ನಾಯಕ ಡೊಳ್ಳಿನ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.