ಕುಷ್ಟಗಿ: ಹೊಸದಾಗಿ ಮದ್ಯದ ಅಂಗಡಿ ಪರವಾನಿಗೆ ನೀಡಲು ಅಂಗಡಿ ಮಾಲೀಕರಿಂದ ಲಂಚ ಪಡೆದ ಆರೋಪದಡಿ ಕೊಪ್ಪಳದ ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಸಿ.ಸೆಲಿನಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ.
ಎಸಿಬಿ ಡಿವೈಎಸ್ಪಿ ಎಂ.ಸಿ ಶಿವಕುಮಾರ ನೇತೃತ್ವದ ತಂಡ ದಾಳಿ ನಡೆಸಿತು. ₹ 1 ಲಕ್ಷ ಲಂಚದ ಹಣ ಪಡೆಯುತ್ತಿರುವ ವೇಳೆ ಸೆಲಿನಾ ಹಾಗೂ ಹೊನ್ನೂರ ಬಾಷಾ ಅವರನ್ನು ಎಸಿಬಿ ವಶಕ್ಕೆ ಪಡೆದಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಎಸಿಬಿ ಮೂಲಗಳು ತಿಳಿಸಿವೆ.
ವೈನ್ ಶಾಪ್ ಪರವಾನಿಗೆ ಮಾಡಿಸಿದ್ದು ನಾನೇ ಎಂದು ಹೇಳಿ ₹3 ಲಕ್ಷ ಲಂಚ ಕೊಡುವಂತೆ ಬಾರ್ ಮಾಲೀಕರಾದ ಶೈಲಜಾ ಪ್ರಭಾಕರಗೌಡ ಅವರಿಗೆ ಡಿ.ಸಿ ಸೆಲಿನಾ ಅವರು ಬೇಡಿಕೆ ಇರಿಸಿದ್ದರು. ₹1 ಲಕ್ಷ ಕೊಡುವುದಾಗಿ ಶೈಲಜಾ ಹೇಳಿದ್ದರು.
ಈ ಬಳಿಕ ಲಂಚದ ಬೇಡಿಕೆಯ ಬಗ್ಗೆ ಎಸಿಬಿಗೆ ದೂರು ಸಲ್ಲಿಸಿದ್ದರು. ಶೈಲಜಾ ಅವರ ನಿವಾಸದಲ್ಲಿ ಲಂಚದ ಹಣ ಪಡೆಯುವ ವೇಳೆ ದಾಳಿ ನಡೆಸಿತ್ತು.ಎಸಿಬಿ ಇನ್ಸ್ಪೆಪೆಕ್ಟರ್ಗಳಾದ ಡಿ.ಎಸ್.ಆಂಜನೇಯ, ಶಿವರಾಜ ಇಂಗಳೆ, ಸಿಬ್ಬಂದಿ ಸಿದ್ದಯ್ಯ, ರಂಗನಾಥ, ಗಣೇಶ, ಜಗದೀಶ್, ಸವಿತಾ, ಶಂಕರಪ್ಪ, ಆನಂದ ಇದ್ದರು.