ಶಿವಮೊಗ್ಗ/ಶಿಕಾರಿಪುರ: ವೀರಶೈವ, ಲಿಂಗಾಯತ ಚುನಾವಣಾ ವಿಷಯವೇ ಅಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶಿಕಾರಿಪುರದಲ್ಲಿ ಗುರುವಾರ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಶಿಕಾರಿಪುರ ಕ್ಷೇತ್ರದ ಜನರು ಈ ಬಾರಿ ಶಾಸಕರನ್ನು ಆರಿಸುತ್ತಿಲ್ಲ. ಮುಖ್ಯಮಂತ್ರಿ ಆಯ್ಕೆ ಮಾಡುತ್ತಿದ್ದಾರೆ. ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಚುನಾವಣೆ ನಂತರ ನಾನೇ ಈ ರಾಜ್ಯದ ಮುಖ್ಯಮಂತ್ರಿ’ ಎಂದರು.
‘ಪ್ರತಿದಿನ ಐದರಿಂದ ಆರು ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ. ಮತದಾನ ಮುಗಿಯುವವರೆಗೂ ಹೆಲಿಕಾಪ್ಟರ್ನಲ್ಲಿ ತಿರುಗುತ್ತೇನೆ’ ಎಂದರು.
ಛತ್ತಿಸಗಡ ಮುಖ್ಯಮಂತ್ರಿ ರಮಣ್ ಸಿಂಗ್ ಮಾತನಾಡಿ, ‘ರಾಜ್ಯದ ಕಾಂಗ್ರೆಸ್ ಸರ್ಕಾರ ದಲಿತರು, ರೈತರು ಹಾಗೂ ಹಿಂದುಳಿದ ವರ್ಗದ ವಿರೋಧಿ. ಐದು ವರ್ಷಗಳಲ್ಲಿ ಇಡೀ ರಾಜ್ಯವನ್ನು ಲೂಟಿ ಮಾಡಿದೆ’ ಎಂದು ಟೀಕಿಸಿದರು.