ಕೊಪ್ಪಳ: ಕೋವಿಡ್ ಕಾರಣದಿಂದಾಗಿ ತಾಲ್ಲೂಕಿನ ಕರ್ಕಿಹಳ್ಳಿಯ ಮೃತ್ಯುಂಜಯೇಶ್ವರ (ಶಿವ ಚಿದಂಬರೇಶ್ವರ) ಮಹಾರಥೋತ್ಸವ ಶನಿವಾರ ಬೆಳಿಗ್ಗೆ 8ಕ್ಕೆ ಸಾಂಕೇತಿಕವಾಗಿ ಜರುಗಿತು.
ಮಹಾರಥೋತ್ಸವದ ಅಂಗವಾಗಿ ಕಳೆದ ಎಂಟು ದಿನಗಳಿಂದ ವಿವಿಧ ಧಾರ್ಮಿಕ, ಹೋಮ, ಹವನ, ಭಜನೆ ಕಾರ್ಯಕ್ರಮಗಳು ಜರುಗಿದವು.
ಮೃತ್ಯುಂಜಯೇಶ್ವರನಿಗೆ ಜಲಾ ಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ,ರಥಾಂಗ ಹೋಮ, ಮೃತ್ಯುಂಜಯ ಹೋಮ ಜರುಗಿತು.ಪ್ರತಿದಿನ ಬೆಳಿಗ್ಗೆ ಸುಮಂಗಲೆಯರಿಂದ ಕುಂಕುಮಾರ್ಚನೆ ಹಾಗೂ ಪಂಡಿತರಿಂದ ಗುರು ಚರಿತ್ರೆ ಪಾರಾಯಣ ಮತ್ತು ಎಂಟು ದಿಂಡಿ ತಂಡದಿಂದ ಅಹೋರಾತ್ರಿ ಭಜನೆ, ನಾಮಸ್ಮರಣೆ, ಅಖಂಡ ವೀಣಾ ಸಪ್ತಾಹ ಜರುಗಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸುರೇಶ ಪಾಟೀಲ ಗುರುಮಹಾರಾಜ ಅವರು, ಪ್ರತಿಯೊಬ್ಬರ ಸಾಧನೆಗೆ ಗುರುವಿನ ಮಾರ್ಗದರ್ಶನ ಆರ್ಶಿವಾದ ಮುಖ್ಯ. ಪ್ರತಿನಿತ್ಯ ಭಕ್ತರು ಭಗವಂತನ ದರ್ಶನಕ್ಕೆ ಬಂದರೆ ರಥೋತ್ಸವದಂದು ಭಗವಂತನು ಭಕ್ತರ ಆರ್ಶಿವಾದಕ್ಕೆ ಬರುತ್ತಾನೆ' ಎಂದರು.
ಕಾರ್ಯಕ್ರಮದಲ್ಲಿ ಮುರಗೋಡದ ವೇ. ದಿವಾಕರ ದೀಕ್ಷಿತ್ ಗುರು ಮಹಾರಾಜ, ಅಗಡಿಯ ವಿಶ್ವನಾಥ ಸ್ವಾಮೀಜಿ, ಕರ್ಕಿಹಳ್ಳಿಯ ವಿಶ್ವನಾಥ ದೀಕ್ಷಿತರು ಇದ್ದರು.
ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಭೇಟಿ ನೀಡಿ ಆಶೀವಾದ ಪಡೆದರು.