ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆ ಅಡಿ 2019-20ರಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಂಡ ಚೆಕ್ಡ್ಯಾಂಗಳ ತನಿಖೆಯನ್ನು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಶರಣಬಸವರಾಜ ಅವರಿಂದ ನಡೆಸಲಾಗುವುದು ಎಂದು ಜಿ.ಪಂ.ಸಿಇಒ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ನರೇಗಾ ಯೋಜನೆಯ ಚೆಕ್ ಡ್ಯಾಂ ನಿರ್ಮಾಣದಡಿ ಅವ್ಯವಹಾರವಾಗಿರುವ ಕುರಿತು ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾ ಗುಣನಿಯಂತ್ರಕರಿಂದ ತನಿಖಾ ಕಾರ್ಯ ಕೈಗೊಳ್ಳಲಾಗಿತ್ತು ಎಂದರು.
ಜಿಲ್ಲಾ ಗುಣನಿಯಂತ್ರಕರಿಂದ ಚೆಕ್ಡ್ಯಾಂ ಪರಿಶೀಲನೆ ಪ್ರಗತಿಯಲ್ಲಿ ಇರುವಾಗಲೇ ಕೋವಿಡ್-19 ಲಾಕ್ಡೌನ್ ಆದ ನಿಮಿತ್ತ ಪರಿಶೀಲನೆಯನ್ನು ಮುಂದೂಡಲಾಗಿತ್ತು.ಅದರಂತೆ ತನಿಖಾ ಕಾರ್ಯದ ಸಂಪೂರ್ಣ ಮೇಲುಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿಯ ಹಿಂದಿನ ಉಪಕಾರ್ಯದರ್ಶಿಗೆ ವಹಿಸಲಾಗಿತ್ತು. ಆದರೆ ಅವರ ಸೇವಾ ನಿವೃತ್ತಿಯ ಕಾರಣದಿಂದ ಆ ಹುದ್ದೆಯು ಒಂದೂವರೆ ತಿಂಗಳುಗಳ ಕಾಲ ಭರ್ತಿಯಾಗದೆ ಇದ್ದಿದರಿಂದ ತನಿಖಾ ಕಾರ್ಯ ವಿಳಂಬವಾಗಿದೆ. ಸದ್ಯ ಉಪಕಾರ್ಯದರ್ಶಿಗಳ ಹುದ್ದೆಗೆ ವರ್ಗಾವಣೆಯಾಗಿ ಬಂದಿರುವ ಉಪ ಕಾರ್ಯದರ್ಶಿಗಳು ತನಿಖಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಜಿಲ್ಲಾಗುಣ ನಿಯಂತ್ರಕರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಉಳಿದ ಕಾಮಗಾರಿ ಸ್ಥಳ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ. ಅವರಿಂದ ಸ್ವೀಕೃತವಾದ ವರದಿಗಳನ್ನು ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.