ಕೊಪ್ಪಳ: ಜಿಲ್ಲೆಯ ರೈತರು ಕಳೆದ (2017-18) ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರು ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿದ್ದ ಕಡಲೆಗೆ ಬೆಂಬಲ ಬೆಲೆ ಬರದೆ ಕಂಗಾಲಾಗಿದ್ದು, ಸಂಬಂಧಿಸಿದಇಲಾಖೆಗೆ ಎಡತಾಕುತ್ತಿದ್ದಾರೆ.
6 ತಿಂಗಳ ಹಿಂದೆ ಖರೀದಿಸಿದ 2,364 ಚೀಲದ 1,182 ಕ್ವಿಂಟಲ್ ಕಡಲೆಗೆ ಬೆಂಬಲ ನೀಡದೆ ಸಬೂಬು ಹೇಳುತ್ತಿರುವ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯವಸಾಯ ಸಹಕಾರ ಸಂಘಗಳ ಮೂಲಕ ರೈತರ ಕಡಲೆಯನ್ನು ಖರೀದಿಸಿದ ಸಹಕಾರ ಮಾರಾಟ ಮಹಾ ಮಂಡಳಿ ಅಧಿಕಾರಿಗಳು ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಶೀಘ್ರ ಪಾವತಿಸುವಂತೆ ರೈತರು ಮಂಡಳಿದ ವ್ಯವಸ್ಥಾಪಕ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.
ಜಿಲ್ಲೆಯ 84 ರೈತರಿಗೆ ₹ 70.92 ಲಕ್ಷ ಬರಬೇಕಿದ್ದು, ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಅಲ್ಪಮಳೆಯಿಂದ ಬೆಳೆ ಬೆಳೆದಿರುವ ರೈತರಿಗೆ ಸಕಾಲಕ್ಕೆ ಹಣ ಸಿಗದೆ ಪರದಾಡುವಂತಾಗಿದೆ. ಖರೀದಿ ಕೇಂದ್ರದ ಶಾಖಾ ವ್ಯವಸ್ಥಾಪಕರು ರೈತರ ಬಾಕಿ ಹಣ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಖಾಸಗಿ ಖರೀದಿಗಾರರ ಬಳಿ ಕೆಲ ರೈತರು ಮಾರಾಟ ಮಾಡಿ ನಿರಾಳದ್ದರೆ, ಮತ್ತೆ ಕೆಲವರು ಖರೀದಿ ಕೇಂದ್ರದ ಮೂಲಕ ಹೆಚ್ಚಿನ ಸಹಾಯಧನದ ನಿರೀಕ್ಷೆಯಲ್ಲಿ ಕಡಲೆಯನ್ನು ಮಾರಿದ್ದಾರೆ. ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಬೀಜ, ಗೊಬ್ಬರ ಖರೀದಿ ಮತ್ತು ಖರ್ಚಿಗೆ ಹಣ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಧಾನ್ಯಗಳನ್ನು ಮಾರಿದರೂ ಸಕಾಲಕ್ಕೆ ಅವರ ನೆರವಿಗೆ ಬರದಿರುವುದರಿಂದ ತೊಂದರೆಗೆ ಸಿಲುಕಿದ್ದು, ಇತ್ತ ಇದ್ದ ಫಸಲು ಇಲ್ಲದೆ ಹಣವೂ ದೊರೆಯದೆ ಗೋಳಿಡುವಂತೆ ಆಗಿದೆ.
ಈ ಕುರಿತು ಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬಾಕಿ ಹಣ ನೀಡುವ ಕುರಿತು ಯಾವುದೇ ತೊಂದರೆ ಇಲ್ಲ. ಚುನಾವಣೆ, ನೀತಿ ಸಂಹಿತೆ ಹಾಗೂ ಕೇಂದ್ರ ಸರ್ಕಾರದಿಂದ ಬರುವ ಸಹಾಯಧನ ಬರಲು ವಿಳಂಬವಾಗಿದ್ದು, ಶೀಘ್ರ ಪಾವತಿ ಮಾಡುವುದಾಗಿ ಹೇಳುತ್ತಾರೆ.
‘ಖರೀದಿ ಕೇಂದ್ರದ ನೂರೆಂಟು ಮಾನದಂಡ ಅನುಸರಿಸಿಯೂ ಕಷ್ಟುಪಟ್ಟು ಬೆಳೆದ ನಮ್ಮ ಧಾನ್ಯಕ್ಕೆ ಬೆಂಬಲ ಬೆಲೆ ನೀಡಲು ಮೀನಮೇಷ ಎನಿಸಿದರೆ ಬದುಕುವುದು ಹೇಗೆ’ ರೈತ ಬಾಲಪ್ಪ ಪ್ರಶ್ನಿಸುತ್ತಾರೆ. ‘ಮಾರಾಟ ಮಾಡಿದ ಉತ್ಪನ್ನಗಳಿಗೆ ಶೀಘ್ರ ಹಣ ನೀಡದೆ ಸತಾಯಿಸುತ್ತಾರೆ. ಇದಕ್ಕಾಗಿ ಮತ್ತೆ ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ರೈತರಿಗೆ ಎದುರಾಗಿದೆ’ ಎಂದು ಅವರು ವಿಷಾದದಿಂದ ಹೇಳುತ್ತಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಖರೀದಿ ನಡೆದಿದ್ದು, ಸಮ್ಮಿಶ್ರ ಸರ್ಕಾರದಲ್ಲಿಯೂ ಅದೇ ನಾಯಕರು ಇರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಿ ಹಿಂದುಳಿದ ಭಾಗದ, ಅದರಲ್ಲಿಯೂ ಕನಿಷ್ಠ ಲಾಭಯೂ ಇಲ್ಲದ ಅತ್ಯಂತ ಬಡ ರೈತರನ್ನು ಕಾಪಾಡಬೇಕಾದ ಜವಾಬ್ದಾರಿ ಇಲ್ಲಿನ ಜನಪ್ರತಿನಿಧಿಗಳದ್ದು ಆಗಿದೆ’ ಎಂದು ರೈತ ಹೋರಾಟಗಾರ ಚಂದ್ರಶೇಖರ ಆಗ್ರಹಿಸುತ್ತಾರೆ.
ಖರೀದಿ ಕೇಂದ್ರಗಳಲ್ಲಿ ರೈತರ ಉತ್ಪನ್ನಗಳನ್ನು ಕೊಂಡುಕೊಂಡ ನಂತರ ಸ್ಥಳದಲ್ಲಿಯೇ ಹಣ ನೀಡುವ ವ್ಯವಸ್ಥೆಯಾಗಬೇಕು. ಇಲ್ಲವೇ ಚೆಕ್ ಮೂಲಕ ನೇರವಾಗಿ ನಮ್ಮ ಖಾತೆಗೆ ಜಮಾ ಮಾಡಿದರೆ ಈ ಗೋಳಾಟ ತಪ್ಪುತ್ತದೆ ಎಂದು ರೈತರು ಹೇಳುತ್ತಾರೆ. ಸಹಕಾರ ಕೇಂದ್ರಕ್ಕೆ ಹೋಗಿ ಅಧಿಕಾರಿಗಳನ್ನು ಕೇಳುವ ಗೋಳು ನಮಗೆ ಇರುವುದಿಲ್ಲ. ಅದಕ್ಕಾಗಿ ಇದ್ದ ಕೆಲಸ ಬಿಟ್ಟು ಇಡೀ ದಿನ ಅಲೆಯಬೇಕಾಗುತ್ತದೆ ಎಂದು ರೈತರು ಆಕ್ರೋಶದಿಂದ ಹೇಳುತ್ತಾರೆ.
ಮೊದಲೇ ರೈತರು ಸಕಾಲಕ್ಕೆ ಮಳೆ-ಬೆಳೆ ಇಲ್ಲದೆ ಸಂಕಷ್ಟದಲ್ಲಿ ಇದ್ದು, ಖರೀದಿ ಕೇಂದ್ರದ ಮೂಲಕ ಖರೀದಿಸಿದ ಕಡಲೆಗೆ ಬೆಂಬಲ ಬೆಲೆಯನ್ನು ಶೀಘ್ರ ನೀಡಿ ರೈತರ ನೆರವಿಗೆ ಸರ್ಕಾರ ಧಾವಿಸಬೇಕು
- ಹನಮಂತ,ರೈತ
ಕಡಲೆ ಖರೀದಿ ವಿವರ | |||
ಕೇಂದ್ರದ ಹೆಸರು | ರೈತರು | ಕ್ವಿಂಟಲ್ | ಮೊತ್ತ (₹ಗಳಲ್ಲಿ) |
ಕೊಪ್ಪಳ | 30 | 242.5 | 14,55,000 |
ಕುಷ್ಟಗಿ | 24 | 303.5 | 18,21,000 |
ತಾವರಗೇರಾ | 25 | 594.5 | 35,67,000 |
ಕುಕನೂರು | 5 | 41.5 | 2,49,000 |
ಒಟ್ಟು | 84 | 1182 | 70,92,000 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.