ಕೊಪ್ಪಳ: ‘ಬಾಲ್ಯವಿವಾಹವನ್ನು ತಡೆಗಟ್ಟಲು ತಾಲ್ಲೂಕಿನಲ್ಲಿ ಸಮನ್ವಯ ಮತ್ತು ಪರಿಶೀಲನಾ ಸಮಿತಿ ರಚಿಸಬೇಕು’ ಎಂದು ತಹಶೀಲ್ದಾರ್ ಅಮರೇಶ ಬಿರಾದಾರ ಹೇಳಿದರು.
ಕೊಪ್ಪಳ ತಾಲ್ಲೂಕು ಆಡಳಿತ ಭವನದಲ್ಲಿ ಈಚೆಗೆ ನಡೆದ ಬಾಲ್ಯವಿವಾಹ ತಡೆ, ತಾಲ್ಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಪ್ರೋತ್ಸಾಹಿಸುವಂತಹ ಅಥವಾ ಯಾವುದೇ ರೀತಿಯ ಅವಕಾಶ ನೀಡುವಂತಹ ಕಾರ್ಯ ನಡೆಯದಿರಲಿ. ಈ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಾಂತ ಇರುವ ಕಲ್ಯಾಣ ಮಂಟಪಗಳಿಗೆ ಸೂಚನೆ ನೀಡಬೇಕು. ಕಲ್ಯಾಣ ಮಂಟಪದ ಮಾಲೀಕರು ಬಾಲ್ಯವಿವಾಹಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಅಂತವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ ಮಾತನಾಡಿ,‘ತಾಲ್ಲೂ ಕಿನಎಲ್ಲ ಬಾಲ್ಯವಿವಾಹ ಪ್ರಕರಣ ತಡೆದು ಅಧಿಕಾರಿಗಳು ಸಂಬಂಧಿಸಿದ ವೆಬ್ ಪೋರ್ಟಲ್ ‘ಸಂರಕ್ಷಿಣಿ ಪೋರ್ಟಲ್’ನಲ್ಲಿ ಪ್ರತಿ ತಿಂಗಳು ಮಾಹಿತಿ ಸಲ್ಲಿಸಬೇಕು’ ಎಂದು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅರವಿಂದ, ಉಪ ನೋಂದಣಾಧಿಕಾರಿ ರುದ್ರಮೂರ್ತಿ, ಆರೋಗ್ಯ ಇಲಾಖೆ ಮೇಲ್ವಿಚಾರಕಿ ಗಾಯತ್ರಿ, ಶಿಕ್ಷಣ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.