ಕೊಪ್ಪಳ: ಬೇಸಿಗೆ ರಜೆಯ ಮಜಾ ಮುಗಿಸಿರುವ ವಿದ್ಯಾರ್ಥಿಗಳು ಮಂಗಳವಾರ ಶಾಲೆಗೆ ಬಂದಾಗ ಅದ್ದೂರಿಯಾಗಿ ಸ್ವಾಗತ ಲಭಿಸಿತು. ಆಟ ಮುಗಿಸಿ ಪಾಠಕ್ಕೆ ಮರಳಿದ ಮಕ್ಕಳಿಂದ ಶಾಲೆಯ ಅಂಗಳದಲ್ಲಿ ಕಲರವ ಕಂಡುಬಂದಿತು.
ಸೋಮವಾರವೇ ಶಾಲೆ ಅಧಿಕೃತವಾಗಿ ಆರಂಭವಾಗಿದ್ದರೂ ಎರಡು ದಿನ ಸ್ವಚ್ಛತೆಗೆ ಹಾಗೂ ತಯಾರಿಗೆ ಅವಕಾಶವಿತ್ತು. ಹೀಗಾಗಿ ಬುಧವಾರ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಂದಿದ್ದರು. ಇನ್ನೂ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು.
ಕೊಪ್ಪಳದ ಸಿಪಿಎಡ್ ಶಾಲೆಯನ್ನು ತಳಿರು ತೋರಣ ಹಾಗೂ ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಆರತಿ ಮಾಡಿ ಸ್ವಾಗತಿಸಿದರು. ಶಿಕ್ಷಕರು ಮಕ್ಕಳಿಗೆ ಪುಷ್ಪಮಳೆಗೆರದರು. ಇದೇ ವೇಳೆ ಮಕ್ಕಳಿಗೆ ಸರ್ಕಾರದಿಂದ ನೀಡಲಾದ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು.
ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿ ಅನಿತಾ, ಶಿಕ್ಷಕ ಬೀರಪ್ಪ ಅಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಶಂಕರಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ, ತಾಲ್ಲೂಕು ಅಕ್ಷರ ದಾಸೋಹದ ಅಧಿಕಾರಿ ಹನುಮಂತಪ್ಪ, ಬಿ.ಆರ್.ಪಿ.ಶರಣಪ್ಪ ರಡ್ಡೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕೊಪ್ಪಳ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಹಪುರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೃಷ್ಣ, ಶರಣಬಸಪ್ಪ, ರಘು, ಮಂಜುನಾಥ್, ಸಹ ಶಿಕ್ಷಕರಾದ ಆಂಜನೇಯ ಪೂಜಾರ್, ಜ್ಯೋತಿ ನರೇಗಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲಪ್ಪ ತೋಟದ, ಪದ್ಮಾವತಿ ನಾಗರಾಜ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.
Highlights - ಪೋಟೊ:2: :ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಶಾಲಾ ಪ್ರಾರಂಭೊತ್ಸವದ ಅಂಗವಾಗಿ ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತಾ ನಾಯಕ ಅವರು ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಿದರು.