ಕೊಪ್ಪಳ: ‘ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಯುವತಿಯರು ಮಂಚ ಹತ್ತಬೇಕು, ಯುವಕರು ಲಂಚ ನೀಡಬೇಕು’ ಎಂಬ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸದಸ್ಯರು ‘ಪ್ರಿಯಾಂಕ್ ಕ್ಷಮೆ ಕೋರದಿದ್ದರೆ ಚಿತ್ತಾಪುರ ಚಲೊ ನಡೆಸಲಾಗುವುದು’ ಎಂದು ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾಣಿಶ್ರೀ ಹಿರೇಮಠ ’ಪ್ರಿಯಾಂಕ್ ಹೇಳಿಕೆ ಖಂಡಿಸಿ ಕೆಲವು ದಿನಗಳ ಹಿಂದೆ ಪ್ರತಿಭಟನೆ ಮಾಡಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದೆವು. ಆದರೂ, ಅವರು ಕ್ಷಮೆಯಾಗಿಸಿಲ್ಲ. ಎರಡ್ಮೂರು ದಿನಗಳಲ್ಲಿ ಕ್ಷಮೆ ಕೇಳದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಹಿಳಾ ಮೋರ್ಚಾದಿಂದ ಚಿತ್ತಾಪುರಕ್ಕೆ ತೆರಳಿ ಪ್ರತಿಭಟನೆ ಮಾಡಲಾಗುವುದು. ಕ್ಷಮೆ ಕೇಳುವ ತನಕ ಬಿಡುವುದಿಲ್ಲ’ ಎಂದರು.
ಮಹಿಳಾ ಮೋರ್ಚಾದ ಜಿಲ್ಲಾ ಸಂಚಾಲಕಿ ಸುನಂದ ಹಂಚಿನಾಳ, ಪ್ರಧಾನ ಕಾರ್ಯದರ್ಶಿ ಗೀತಾ, ಖಜಾಂಚಿ ಕೀರ್ತಿ ಪಾಟೀಲ, ರಾಜ್ಯ ಕಾರ್ಯಕಾರಣಿ ಸದಸ್ಯೆ ಶೋಭಾರಾಣಿ ಇದ್ದರು.