ಕೊಪ್ಪಳ: ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವರ್ತನೆ ಸರಿಯಾಗಿಲ್ಲ. ಹಗುರವಾಗಿ ಮಾತನಾಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ವಾತಾವರಣ ನಮ್ಮ ಪರ ಇಲ್ಲ ಎಂದು ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಚುನಾವಣೆ ಪ್ರಚಾರ ನಿಮಿತ್ತಜಿಲ್ಲೆಗೆ ಭೇಟಿ ನೀಡಿದ್ದ ಅವರು ಸಮೀಪದ ಬಸಾಪುರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,2014ಕ್ಕೆ ಹೋಲಿಕೆ ಮಾಡಿದರೆ ಬಿಜೆಪಿಗೆ ಈಗ ಒಳ್ಳೆಯ ವಾತಾವರಣವಿದೆ. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲ್ಲುವುದು ಖಚಿತವಾದ ನಂತರ ಕುಮಾರಸ್ವಾಮಿ ಮನಬಂದಂತೆ ಮಾತಾಡ್ತಿದ್ದಾರೆ ಎಂದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಗೃಹ ಸಚಿವ ಎಂ.ಬಿ.ಪಾಟೀಲ ಲಿಂಗಾಯತ ಪ್ರತ್ಯೇಕ ಧರ್ಮದ ಪರ-ವಿರೋಧ ಮಾತುಗಳು ಅವರಿಗೆ ಬಿಟ್ಟಿದ್ದು, ತಂತ್ರ–ಕುತಂತ್ರದಿಂದ ಅವರು ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹೇಳಿದರು.
ಸುಮಲತಾ ಅವರನ್ನು ‘ಮಾಯಾಂಗನೆ’ ಎಂಬ ಮಂಡ್ಯದ ಸಂಸದ ಶಿವರಾಮೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸೋಲುವ ಭೀತಿಯಿಂದ ಹೀಗೆಲ್ಲ ಮಾತಾಡ್ತಿದ್ದಾರೆ. ಸಂಸದ ಶಿವರಾಮೇಗೌಡ ಹಗುರವಾಗಿ ಮಾತಾಡುವುದಕ್ಕೆ ಹೆಸರುವಾಸಿ.ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಗೆಲುವು ಖಚಿತ ಎಂದು ಯಡಿಯೂರಪ್ಪ ಹೇಳಿದರು.