ಗಂಗಾವತಿ: ಸಾರ್ವಜನಿಕರ ಸಹಕಾರದಿಂದ ಮಾತ್ರ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದರು.
ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಅವರು ಮಾತನಾಡಿದರು.
ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ನಮ್ಮ ಜಿಲ್ಲೆಯಲ್ಲಿಯೇ ಪ್ರೋಡಕ್ಷನ್ ಫ್ಲಾಂಟ್ ಇರುವುದರಿಂದ ಆಕ್ಸಿಜನ್ ಕೊರತೆ ಇಲ್ಲ. ಕೆಲವೊಂದು ಆಸ್ಪತ್ರೆಗಳಲ್ಲಿ ಕಮ್ಯೂನಿಕೇಷನ್ ಕೊರತೆಯಿಂದ ಕೆಲವೊಂದು ಘಟನೆಗಳು ನಡೆದಿರಬಹುದು. ಆ ರೀತಿಯ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ವ್ಯಾಟ್ಸಾ ಆ್ಯಪ್ ಗ್ರೂಪ್ ಅನ್ನು ರಚಿಸಲಾಗಿದೆ. ಆ ಗ್ರೂಪ್ನಲ್ಲಿ ಆಯಾ ಆಸ್ಪತ್ರೆಯ ವೈದ್ಯರು ಮೆಸೇಜ್ ಮಾಡಿದ ಕೂಡಲೇ ಅವರಿಗೆ ಆಕ್ಸಿಜನ್ ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಳೆದ ವಾರ ಗವಿಮಠದ ಶ್ರೀ ನೇತೃತ್ವದಲ್ಲಿ ಕೋವಿಡ್ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು. ಜನರು ನಿಯಮ ಪಾಲಿಸದೇ ಇದ್ದರೆ, ಅನಿರ್ವಾಯವಾಗಿ ದಂಡವನ್ನು ವಿಧಿಸಿ, ಕ್ವಾರಂಟೈನ್ ಸೆಂಟರ್ಗೆ ಕಳುಹಿಸಲಾಗುವುದು. ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದರು.
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಕೋವಿಡ್ ಸೆಂಟರ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಲ್ಲಿನ ವೈದ್ಯರಿಂದ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ, ಸಿದ್ರಾಮೇಶ್ವರ, ಡಾ.ಎಂ.ಜಿ.ಮಹೇಶ್, ಡಾ.ಈಶ್ವರ ಸವಡಿ ಇದ್ದರು.