ಕೊಪ್ಪಳ: ಮಾರುಕಟ್ಟೆಯಲ್ಲಿ ಬಾಳೆಹಣ್ಣಿಗೆ ಬೆಲೆ ಬಾರದೇ ರೈತರೊಬ್ಬರು ತಮ್ಮ ಜಮೀನಿನಲ್ಲಿ ಇದ್ದ ಎಲ್ಲ ಬಾಳೆ ಬೆಳೆಯನ್ನು ನಾಶ ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ಡಂಬ್ರಳ್ಳಿ ಗ್ರಾಮದರೈತ ಸಿದ್ದರಡ್ಡಿ ದುರ್ಗದ ಎಂಬುವವರು ತಮ್ಮ6 ಎಕರೆಯಲ್ಲಿ ₹9ರಿಂದ ₹10 ಲಕ್ಷ ವೆಚ್ಚ ಮಾಡಿ ಬೆಳೆದಿದ್ದ ಬೆಳೆಯನ್ನು ಜೆಸಿಬಿ ಮೂಲಕ ನಾಶ ಮಾಡಿದ ಘಟನೆ ರೈತರ ದುಃಸ್ಥಿತಿಗೆ ಕನ್ನಡಿ ಹಿಡಿದಂತೆ ಆಗಿದೆ.
ಮೈತುಂಬಿ ಬೆಳೆದಿದ್ದ ಬಾಳೆ ಬೆಳೆ ಗೊನೆ ಹೊತ್ತುಕೊಂಡೇ ನೆಲಕ್ಕುರುಳುತ್ತಿತ್ತು. ಮಾರುಕಟ್ಟೆಯಲ್ಲಿ ದರ ಕುಸಿತದಿಂದ ನಾಶ ಮಾಡಿದ್ದಾರೆ. ಮಾರುಕಟ್ಟೆಯಲ್ಲಿಸಾಮಾನ್ಯವಾಗಿ ಬಾಳೆ ಕೆಜಿಗೆ 12ರಿಂದ 16ಕ್ಕೆಮಾರಾಟ ಮಾಡುತ್ತಿದ್ದರು.ಇದರಲ್ಲಿ 9-10 ಸಿಕ್ಕರೂ ರೈತರಿಗೆ ಲಾಭ. ಆದರೆ ಮಾರುಕಟ್ಟೆಯಲ್ಲಿ ಕೆಜಿಗೆ ₹2 ಕೇಳುತ್ತಿದ್ದಾರೆ. ಇದರಿಂದ ರೈತ ಜೆಸಿಬಿ ಮೂಲಕ ಸಂಪೂರ್ಣ ಹರಗಿದ್ದಾರೆ.
‘ಕೇವಲ ಕೆಜಿಗೆ ₹2 ಕೇಳ್ತಾರೆ, ಅದನ್ನು ತೆಗೆದುಕೊಳ್ಳುವುದಿಲ್ಲ. ಈ ರೇಟಿಗೆ ಕೊಟ್ಟರೆ ಕಟಾವು ಮಾಡಿದ ಕೂಲಿ ಕೂಡಾ ನಮಗೆ ಬರುತ್ತಿಲ್ಲ. ಹೀಗಾಗಿ, ಜೆಸಿಬಿ ಮೂಲಕ ನೆಲಸಮ ಮಾಡಿದ್ದೇವೆ’ ಎನ್ನುತ್ತಾರೆ ರೈತ ಸಿದ್ದರಡ್ಡಿ ದುರ್ಗದ.
‘30 ಲಕ್ಷ ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತ ಬೆಲೆ ಇಲ್ಲದೆ ಹೀಗೆ ಮಾಡಿದ್ದಾರೆ. ಹಾಕಿದ ಎರಡು ಎಕರೆ ಬಾಳೆಬೆಳೆಯನ್ನು ಕಟಾವು ಮಾಡಲು ಪ್ರಾರಂಭಿಸಿದ್ದರೂ ಯಾರು ಬಂದು ಕೇಳುತ್ತಲೇ ಇಲ್ಲ. ಹೀಗಾಗಿ, ಅದು ಹಣ್ಣಾಗಿ ನೆಲಕ್ಕೆ ಬೀಳುತ್ತಿದೆ. ಏನ್ ಮಾಡೋದು’ ಎಂದು ಗ್ರಾಮದ ರೈತರಾದ ಕನಕಪ್ಪ ನಾಯಕ ಪ್ರಶ್ನಿಸುತ್ತಾರೆ.